ಹಾವೇರಿ: ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಕಾಟೇನಹಳ್ಳಿ ಗ್ರಾಮದ ಅನ್ನದಾತನ ಅಂಗಳಕ್ಕೆ ಶನಿವಾರ ಆಗಮಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕ್ಯೂಬಾದ ರಾಯಬಾರಿ ಮಿಗ್ವೆಲ್ ಏಂಜೆಲ್ ರಮಿರೇಜ್ ರಾಮೋಸ್ ದಂಪತಿ, ಸಂಸದೆ ಮೇನಕಾ ಗಾಂಧಿ ಅವರಿಗೆ ಗ್ರಾಮದಲ್ಲಿ ಭವ್ಯ ಸ್ವಾಗತ ನೀಡಲಾಯಿತು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಶೂನ್ಯ ಬಂಡವಾಳ ಕೃಷಿಕ ಹನುಮಂತಪ್ಪ ಕಾರಗಿ, ಅವರ ಪತ್ನಿ ರತ್ನಮ್ಮ ಹಾಗೂ ಗ್ರಾಮಸ್ಥರು ಆರತಿ ಬೆಳಗಿ ಸ್ವಾಗತಿಸಿದರೆ, ಗ್ರಾಮದ ನೂರಾರು ಮಹಿಳೆಯರು ಕುಂಭ ಮೇಳಗಳೊಂದಿಗೆ ಸ್ವಾಗತಿಸಿದರು.
ಗ್ರಾಮದ ಹನುಮಂತ ದೇವಸ್ಥಾನದ ಆವರಣದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಸಸಿ ನೆಟ್ಟರು. ನಂತರ ಹನುಮಂತಪ್ಪ ಕಾರಗಿ ದಂಪತಿಯೊಂದಿಗೆ ಮೆರವಣಿಗೆ ಮೂಲಕ ಹನುಮಂತಪ್ಪನ ಮನೆಗೆ ಆಗಮಿಸಿದರು. ಗ್ರಾಮದ ಮಹಿಳೆಯರು ಯಡಿಯೂರಪ್ಪ ಅವರಿಗೆ ಆರತಿ ಬೆಳಗಿ ಬರಮಾಡಿಕೊಂಡರು.
ಕಾರಗಿ ಮನೆಯ ಕಟ್ಟೆಯ ಬಿ.ಎಸ್.ಯಡಿಯೂರಪ್ಪ, ಕ್ಯೂಬಾದ ರಾಯಬಾರಿ ಮಿಗ್ವೆಲ್ ಏಂಜೆಲ್ ರಮಿರೇಜ್ ರಾಮೋಸ್ ದಂಪತಿ, ಸಂಸದೆ ಮೇನಕಾ ಗಾಂಧಿ, ಸಚಿವ ಸಿ.ಎಂ. ಉದಾಸಿ,ಸಚಿವೆ ಶೋಭಾ ಕರಂದ್ಲಾಜೆ ಅವರು ಹನುಮಂತಪ್ಪ ಕಾರಗಿ ದಂಪತಿ ಜತೆ ಸಹಭೋಜನ ಮಾಡಿದರು. ಜೋಳದ ರೊಟ್ಟಿ, ಅವರೆ ಕಾಳು, ತೊಗರಿ ಬೆಳೆ, ಅಲಸಂದಿ ಕಾಳು, ಬದನೆಕಾಯಿ ಪಲ್ಲೆ, ಕಡ್ಲಿಬೇಳೆಯ ಕರಿಗಡಬು, ಅನ್ನ ಸಾಂಬಾರು ಸವಿದ ಮುಖ್ಯಮಂತ್ರಿ , ಅತಿಥಿಗಳು ತಮ್ಮ ಬಾಲ್ಯದ ಜೀವನದ ನೆನಪು ತಂದುಕೊಟ್ಟಿತಲ್ಲದೆ ಶುದ್ಧ ಸಾವಯವ ಊಟ ಮಾಡಿದಸಂತೃಪ್ತ ಭಾವನೆ ಮೂಡಿತು ಎಂದರು.