ಕುಷ್ಟಗಿ: ಖಾಸಗಿ ಕಂಪೆನಿಗಳು ಕಳಪೆ ಬೀಜಗಳನ್ನು ವಿತರಿಸಿವೆ ಎಂದು ಮಂಗಳವಾರ ಇಲ್ಲಿ ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಖಾಸಗಿ ಬೀಜ ಕಂಪೆನಿಗಳ ಮೇಲೆ ಕ್ರಮ ಜರುಗಿಸಿ ಹಾನಿ ಅನುಭವಿಸಿರುವ ರೈತರಿಗೆ ಪರಿಹಾರ ಒದಗಿಸುವಂತೆ ಪರಶುರಾಮಪ್ಪ, ಸುವರ್ಣ ಕುಂಬಾರ, ಸಿದ್ದಪ್ಪ ಆವಿನ ಇತರರು ಕೃಷಿ ಇಲಾಖೆಯನ್ನು ಒತ್ತಾಯಿಸಿದರು.
ವಿಷಯವನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ತಜ್ಞರ ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಹಾಯಕ ಕೃಷಿ ನಿರ್ದೇಶಕ ಶಿವಕುಮಾರಸ್ವಾಮಿ ತಿಳಿಸಿದರು. ತಜ್ಞರ ವರದಿ ನಂತರ ಇಲಾಖೆ ಕ್ರಮ ತೆಗೆದುಕೊಳ್ಳುತ್ತದೆ ಎಂದರು. ತಪ್ಪಿತಸ್ಥ ಬೀಜದ ಕಂಪೆನಿಯನ್ನು ಕಪ್ಪುಪಟ್ಟಿಯಲ್ಲಿ ಸೇರಿಸುವಂತೆ ಕಾರ್ಯ ನಿರ್ವಹಣಾಧಿಕಾರಿ ಜಯರಾಮ ಚವ್ಹಾಣ ಸಲಹೆ ನೀಡಿದರು.
ಆಗಸ್ಟ್ ಕೊನೆಯವಾರದ ವೇಳೆಗೆ ತಾಲ್ಲೂಕಿನಲ್ಲಿ ಶೇ 98ರಷ್ಟು ಪ್ರದೇಶದಲ್ಲಿ ಬಿತ್ತನೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿ ವಿವರಿಸಿದ್ದಕ್ಕೂ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಅಧ್ಯಕ್ಷೆ ಲಕ್ಷ್ಮೀಬಾಯಿ ಮೇಟಿ, ಉಪಾಧ್ಯಕ್ಷೆ ಯಲ್ಲಮ್ಮ ಸಭೆಯಲ್ಲಿದ್ದರು.