ಚಿಕ್ಕಬಳ್ಳಾಪುರ: ತಾಲ್ಲೂಕಿನ ನಂದಿ ಗ್ರಾಮದ ಭೋಗನಂದೀಶ್ವರ ದೇಗುಲದ ಬ್ರಹ್ಮರಥೋತ್ಸವದ ಪ್ರಯುಕ್ತ ಸಡಗರ-ಸಂಭ್ರಮಾಚರಣೆ ಮುಂದುವರಿದಿದೆ. ದೇಗುಲದಲ್ಲಿ ಇದೇ ಪ್ರಪ್ರಥಮ ಬಾರಿಗೆ ಸಾವಿರಕ್ಕೂ ಹೆಚ್ಚು ಕೆಂಗುಲಾಬಿ ಮತ್ತು ಹಳದಿ ಗುಲಾಬಿಗಳಿಂದ ಕೂಡಿದ ಶಿವಲಿಂಗವನ್ನು ನಿರ್ಮಿಸಲಾಗಿದೆ.
ಬಗೆಬಗೆಯ ಹೂಗಳಿಂದ ಮತ್ತು ಹಸಿರು ಗಿಡಗಳಿಂದ ಸುಮಾರು 5 ಅಡಿ ಎತ್ತರದ ಶಿವಲಿಂಗವನ್ನು ನಿರ್ಮಿಸಲಾಗಿದ್ದು, ಭಕ್ತರನ್ನು ಆಕರ್ಷಿಸುತ್ತಿದೆ. ಬಾಳೆ ಎಲೆ, ಸಣ್ಣ ಆಲಂಕಾರಿಕ ಹಸಿರು ಸಸಿಗಳು, ಹೂವು ಮೊದಲಾದವುಗಳನ್ನು ಬಳಸಲಾಗಿದೆ. ಮಂಗಳವಾರ ತೇರು ಎಳೆಯಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಈ ಹಿಂದಿನ ಬ್ರಹ್ಮರಥೋತ್ಸವಗಳಿಗಿಂತ ಭಿನ್ನವಾದ ರೀತಿಯಲ್ಲಿ ಆಚರಿಸಲು ಪಣ ತೊಟ್ಟಿರುವ ಮುಜರಾಯಿ ಇಲಾಖೆ, ದೇವಾಲಯದ ಸಿಬ್ಬಂದಿ ಮತ್ತು ನಂದಿ ಗ್ರಾಮಸ್ಥರು ನವೀನ ಮಾದರಿಯ ಆಕರ್ಷಣೆಗೆ ಒತ್ತು ನೀಡಿದ್ದಾರೆ.
`ಶಿವರಾತ್ರಿ ಮತ್ತು ಬ್ರಹ್ಮರಥೋತ್ಸವದ ಪ್ರಯುಕ್ತ ಇದೇ ಮೊದಲ ಬಾರಿ ಹೂವುಗಳಿಂದ ಕೂಡಿದ ಶಿವಲಿಂಗ ನಿರ್ಮಿಸಿದ್ದೇವೆ. ಒಂದು ಸಾವಿರಕ್ಕೂ ಹೆಚ್ಚು ಕಂಪು ಮತ್ತು ಹಳದಿ ಗುಲಾಬಿಗಳನ್ನು ಬಳಸಿದ್ದೇವೆ~ ಎಂದು ತಾಲ್ಲೂಕಿನ ಅಂದಾರ್ಲಹಳ್ಳಿ ನಿವಾಸಿ ಮೋನಾರ್ `ಪ್ರಜಾವಾಣಿ~ಗೆ ತಿಳಿಸಿದರು.
`ತೋಟ, ಮಾರುಕಟ್ಟೆಯಿಂದ ಹೂವು ತಂದಿದ್ದೇವೆ. ದೇಗುಲಕ್ಕೆ ಭೇಟಿ ನೀಡುವ ಭಕ್ತರು ದೇವರ ದರ್ಶನ ಮಾಡುವುದರ ಜೊತೆಗೆ ಶಿವಲಿಂಗನ ದರ್ಶನ ಕೂಡ ಮಾಡಲಿ ಎಂಬ ಉದ್ದೇಶ. ಅಂಬರೀಶ್, ನಸ್ರುದ್ದೀನ್ ಮುಂತಾದವರ ಸಹಾಯದಿಂದ ಶಿವಲಿಂಗ ನಿರ್ಮಿಸಲಾಗಿದೆ~ ಎಂದು ಹೇಳಿದರು.