ಹಾಸನ:ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಪಂಚಾಯಿತಿ ನೌಕರರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ ಜಿ.ಪಂ. ಸಿಇಓ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.‘ಸರ್ಕಾರ 3ನೇ ಹಣಕಾಸು ಆಯೋಗದ ಶಿಫಾರಸನ್ನು ಜಾರಿ ಮಾಡುವುದು ಹಾಗೂ ಗ್ರಾಪಂ ನೌಕರರಿಗೆ ಕನಿಷ್ಠ ವೇತನ ನೀಡಲು ಪ್ರಸ್ತಾವನೆ ನೀಡಿರುವುದು, ಗ್ರಾಮೀಣ ಅಭಿವೃದ್ಧಿ ಪಂಚಾಯತ್ರಾಜ್ ಇಲಾಖೆಗೆ ಕೇಡರ್ ಅಂಡ್ ರಿಕ್ರ್ಯೂಟ್ಮೆಂಟ್ ನಿಯಮಾವಳಿಯಲ್ಲಿ ಗ್ರಾಪಂ ನೌಕರರಿಗೆ ಶೇ 70 ಸ್ಥಾನ ಮೀಸಲಿಟ್ಟಿದ್ದು ಸ್ವಾಗತಾರ್ಹ.
ಆದರೆ ಅದರಲ್ಲಿ ಗ್ರೇಡ್-2 ಕಾರ್ಯದರ್ಶಿ ಹುದ್ದೆಗೆ ಗ್ರಾಪಂ ಕರ ವಸೂಲಿಗಾರ, ಗುಮಾಸ್ತ ಮತ್ತು ಟೈಪಿಸ್ಟ್ಗಳಿಗೆ ಶೇ 100 ಸ್ಥಾನ ಮೀಸಲಿಡಬೇಕು ಹಾಗೂ ಸರ್ವಿಸ್ ರೂಲ್ಸ್ನಲ್ಲಿ ತೋರಿಸಿರುವ ಲಿಖಿತ ಪರೀಕ್ಷೆ ಹಾಗೂ ಅರ್ಹತಾ ಅಂಕಗಳ ಆಧಾರದ ಮೇಲೆ ನೇಮಕಾತಿಯನ್ನು ಕೈಬಿಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
‘ಎಸ್ಎಸ್ಎಲ್ಸಿ ಪಾಸಾದ 10 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಜೇಷ್ಠತೆ ಆಧಾರದಲ್ಲಿ ಬಡ್ತಿ ನೀಡಲಾಗುತ್ತಿತ್ತು.ಈಗಲೂ ಅದನ್ನೇ ಮುಂದುವರೆಸುವ ರೀತಿಯಲ್ಲಿ ಸೂಕ್ತ ತಿದ್ದುಪಡಿ ಮಾಡಬೇಕು’ ಎಂದು ಒತ್ತಾಯಿಸಿದರು.
ಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸಿ ಗ್ರಾ.ಪಂ. ಗಳಿಂದಲೇ ನೇಮಕ ಮಾಡಿಕೊಳ್ಳಬೇಕೆಂದೂ ಒತ್ತಾಯಿಸಿದರು.ಸಿಐಟಿಯು ರಾಜ್ಯ ಜಂಟಿ ಕಾರ್ಯದರ್ಶಿ ಮತ್ತು ಜಿಲ್ಲಾ ಪ್ರಧಾನ ಸಂಚಾಲಕ ಧರ್ಮೇಶ್ ಇದ್ದರು.