ಮಂಡ್ಯ: ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಪದಚ್ಯುತಿ ಖಂಡಿಸಿ, ಸ್ವಾಭಿಮಾನಿ ಒಕ್ಕಲಿಗರ ಸೇವಾ ಒಕ್ಕೂಟದ ಕರೆಯಂತೆ ಬುಧವಾರ ನಡೆದ ಬಂದ್ ಮಂಡ್ಯ ನಗರದಲ್ಲಿ ಭಾಗಶಃ ಹಾಗೂ ಜಿಲ್ಲೆಯ ಮಳವಳ್ಳಿ, ಮದ್ದೂರು ಮತ್ತು ಪಾಂಡವಪುರ ತಾಲ್ಲೂಕುಗಳಲ್ಲಿ ಸಂಪೂರ್ಣ ಯಶಸ್ವಿಯಾಗಿದೆ.
ಅಂಗಡಿ-ಮುಂಗಟ್ಟುಗಳು ಬೆಳಿಗ್ಗೆಯಿಂದಲೇ ಬಂದ್ ಆಗಿದ್ದವು. ಜನರ ಸಂಚಾರ ವಿರಳವಾಗಿತ್ತು. ಕೆಲವು ಶಾಲಾ-ಕಾಲೇಜುಗಳು ಮುನ್ನೆಚ್ಚರಿಕೆ ಕ್ರಮವಾಗಿ ರಜೆ ಘೋಷಿಸಿದ್ದರೆ, ಇನ್ನು ಕೆಲವು ಕಡೆ ಪ್ರತಿಭಟನಾಕಾರರೇ ತೆರಳಿ ಬಂದ್ ಮಾಡಿಸಿದರು.
ಚಲನಚಿತ್ರ ಮಂದಿರಗಳಲ್ಲಿ ಬೆಳಗಿನ ಪ್ರದರ್ಶನ ನಡೆಯಲಿಲ್ಲ. ಪಾಂಡವಪುರ- ಮಂಡ್ಯ ನಡುವೆ ಹೊರತುಪಡಿಸಿದರೆ ಉಳಿದೆಡೆ ಬಸ್ ಸಂಚಾರಕ್ಕೆ ಎಂದಿನಂತೇ ಇತ್ತು.
ಬಿಜೆಪಿ ಹೈಕಮಾಂಡ್ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ಮಂಡ್ಯದ ಸಂಜಯ ವೃತ್ತದಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿದರು. ನಗರದಲ್ಲಿ ಬೈಕ್ ರ್ಯಾಲಿ ನಡೆಸಿದ ಒಕ್ಕೂಟ ಪದಾಧಿಕಾರಿಗಳು, ತೆರೆದಿದ್ದ ಅಂಗಡಿಗಳನ್ನು ಬಂದ್ ಮಾಡಿಸಿದರು. ಸರ್ಕಾರಿ ಕಚೇರಿಗಳನ್ನು ಬಂದ್ ಮಾಡಿಸಲು ಮುಂದಾದಾಗ ಪೊಲೀಸರು ಅವರನ್ನು ತಡೆದರು.