ಕಮಲಾಪುರ: ಸಮೀಪದ ಮಹಾಗಂವ ರೈತ ಸಂಪರ್ಕ ಕೇಂದ್ರದಲ್ಲಿ ಬಿಕೆಡಿಬಿ ನಿರ್ದೇಶಕ ವೈಜನಾಥ ತಡಕಲ್ ಬುಧವಾರ ರೈತರಿಗೆ ಕಡಲೆ ಹಾಗೂ ಜೋಳದ ಬೀಜ ವಿತರಿಸಿದರು.
ನಂತರ ಮಾತನಾಡಿದ ಅವರು, ಹಿಂಗಾರು ಬಿತ್ತನೆಗೆ ಇನ್ನೂ ಕಾಲಾವಕಾಶವಿದ್ದು, ಸರ್ಕಾರ ಎಲ್ಲ ರೈತ ಸಂಪರ್ಕ ಕೇಂದ್ರಗಳಿಗೆ ಈಗಾಗಲೇ ಕಡಲೆ ಹಾಗೂ ಜೋಳದ ಬೀಜ ಸರಬರಾಜು ಮಾಡಿದೆ. ಪರಿಶಿಷ್ಟ ಜಾತಿ, ಪಂಗಡದವರಿಗೆ ಶೇ 75, ಇನ್ನುಳಿದ ರೈತರಿಗೆ ಶೇ 50ರಷ್ಟು ರಿಯಾಯಿತಿ ನೀಡಲಾಗಿದೆ.
ಇದು ಸರ್ಕಾರದ ರೈತಪರ ಕಾಳಜಿಗೆ ಹಿಡಿದ ಕೈಗನ್ನಡಿಯಾಗಿದೆ. ಎಲ್ಲ ರೈತರು ಬಿತ್ತನೆಗೆ ಬೇಕಾದ ಬೀಜ ಗೊಬ್ಬರ ಶೇಖರಿಸಿಟ್ಟುಕೊಂಡು ಸರಿಯಾದ ಸಮಯಕ್ಕೆ ಬಿತ್ತನೆ ಮಾಡಿದರೆ ಹೆಚ್ಚಿನ ಇಳುವರಿ ಪಡೆಯಬಹುದು ಎಂದು ಸಲಹೆ ನೀಡಿದರು.
ಕೆಡಿಪಿ ಸದಸ್ಯ ಮಜರ ಅಲಿ ದರ್ಜಿ, ಮುಖಂಡ ಗುರುರಾಜ ಪಾಟೀಲ, ಗ್ರಾ.ಪಂ ಉಪಾಧ್ಯಕ್ಷ ನರೇಶ ಹರಸೂರಕರ, ರೈತ ಸಂಪರ್ಕ ಕೇಂದ್ರದ ಅಧಿಕಾರಿ ವಿಜಯಲಕ್ಷ್ಮೀ ಜೈನಾಪೂರೆ, ಸಿಬ್ಬಂದಿ ಮಾರುತಿ, ಗುಂಡಪ್ಪ ಸಿರಡೋಣ, ಅಂಬಾರಾಯ ಹಿಪ್ಪರಗಿ, ವೀರಣ್ಣ ಉಚ್ಚದ, ಸತೀಶ ಸಾಹು ಇದ್ದರು.