ಚಿಕ್ಕಮಗಳೂರು: ಕಠಿಣ ಪರಿಸ್ಥಿತಿಯಲ್ಲಿ ದೇಶ ಸೇವೆ ಮಾಡುವ ಸೈನಿಕರಿಗೆ ನಿವೃತ್ತರಾದ ನಂತರ ಉತ್ತಮ ಸವಲತ್ತು ಒದಗಿಸಬೇಕಾದ್ದು ಅಗತ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ ಕುಮಾರ್ ವಿಕಾಸ್ ಅಭಿಪ್ರಾಯಪಟ್ಟರು.
ನಗರದಲ್ಲಿ ಶನಿವಾರ ಮಾಜಿ ಸೈನಿಕರ ಜಿಲ್ಲಾ ಸಮ್ಮೇಳನ ಉದ್ಘಾಟಿಸಿದ ಅವರು, ಸೈನಿಕರು ಸೇವೆಯಲ್ಲಿದ್ದಾಗ ಊರಿನಲ್ಲಿರುವ ಕುಟುಂಬಗಳ ರಕ್ಷಣೆ, ಹಿತಚಿಂತನೆ ಬಯಸುತ್ತಾರೆ. ಈ ನಿಟ್ಟಿನಲ್ಲಿ ತಮ್ಮಿಂದಾದ ನೆರವು ನೀಡಲಾಗುವುದು. ಜಿಲ್ಲೆಯ ಮಾಜಿ ಸೈನಿಕರ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸಲಾಗುವುದು ಎಂದು ಭರವಸೆ ನೀಡಿದರು.
ಮಾಜಿ ಸೈನಿಕರು ಸಂಘ ರಚಿಸಿಕೊಳ್ಳುವುದು ಅಗತ್ಯ. ನಿವೃತ್ತರಾದ ನಂತರ ಪ್ರತಿ ಸೈನಿಕ ತಮ್ಮ ಮಕ್ಕಳನ್ನು ಸೇನೆಗೆ ಸೇರಲು ಪ್ರೋತ್ಸಾಹಿಸಬೇಕು ಎಂದು ಕರ್ನಲ್ ಪಿ.ವಿ.ಹರೀಶ್ ಹೇಳಿದರು.
ಫೆಬ್ರುವರಿಯಲ್ಲಿ ನಿವೃತ್ತ ಸೈನಿಕರಿಗಾಗಿ ಇಸಿಎಚ್ ಆಸ್ಪತ್ರೆ ಸ್ಥಾಪನೆಯಾಗಲಿದೆ. ಚಿಕ್ಕಮಗಳೂರು, ಹಾಸನ ಜಿಲ್ಲೆಯ ಮಾಜಿ ಸೈನಿಕರಿಗೂ ಪ್ರಯೋಜನವಾಗಲಿದೆ ಎಂದ ಅವರು, ಮಾಜಿ ಸೈನಿಕರ ಸಂಘಟನೆಗೆ ಕಚೇರಿ ಒದಗಿಸುವಂತೆ ಜಿಲ್ಲಾಡಳಿತವನ್ನು ಕೋರಿದರು.
ನಿವೃತ್ತ ವಾಯು ಸೇನಾಧಿಕಾರಿ ಜೇಮ್ಸ ಟಿ.ವರ್ಗೀಸ್ ಮಾತನಾಡಿ, ಜಿಲ್ಲೆಯಲ್ಲಿ 3 ಸಾವಿರ ಮಾಜಿ ಸೈನಿಕರಿದ್ದರೂ ಸಂಘಟನೆಯಲ್ಲಿ ಕೆಲವರಷ್ಟೇ ಸದಸ್ಯರಾಗಿದ್ದಾರೆ. ಎಲ್ಲ ಮಾಜಿ ಸೈನಿಕರೂ ಸಂಘಟನೆ ಸೇರಬೇಕು ಎಂದು ಗಮನ ಸೆಳೆದರು.
ಜಿಲ್ಲಾ ಪಂಚಾಯಿತಿ ಸಿಇಒ ರಂಗೇಗೌಡ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಬಸವರಾಜು, ಹಾಸನ ಸಂಘದ ಅಧ್ಯಕ್ಷ ಸೋಮೇಶ್, ಸೈನಿಕ ಕಲ್ಯಾಣ-ಪುನರ್ವಸತಿ ಇಲಾಖೆ ಉಪ ನಿರ್ದೇಶಕ ಸಿ.ಶಿವಸ್ವಾಮಿ ಇದ್ದರು.
2ನೇ ಮಹಾಯುದ್ಧದಲ್ಲಿ ಭಾಗವಹಿಸಿದ್ದ ಜಿಲ್ಲೆಯ ಯೋಧರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಹನುಮಂತಪ್ಪ ವೃತ್ತದಿಂದ ಮಾಜಿ ಸೈನಿಕರ ಮೆರವಣಿಗೆ ನಡೆಯಿತು.