ರಾಯಚೂರು: ಬಿಜೆಪಿ ಸರ್ಕಾರದ ಅಭಿವೃದ್ಧಿ ಕೆಲಸಗಳು ವಿರೋಧ ಪಕ್ಷಗಳಿಗೆ ಭಯ ಹುಟ್ಟಿಸಿದ್ದು, ಹತಾಶೆಯಿಂದ ವೃಥಾ ಟೀಕೆ ಮಾಡುತ್ತಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ ಶ್ರೀರಾಮುಲು ಶನಿವಾರ ಆಪಾದಿಸಿದರು.ನೆರೆ ಸಂತ್ರಸ್ತರ ಪುನರ್ವಸತಿಗಾಗಿ ಆಸರೆ ಯೋಜನೆಯಡಿ ಉಪ್ರಾಳ, ಜಾಗೀರ ವೆಂಕಟಾಪುರ ಹಾಗೂ ಲಿಂಗಸುಗೂರು ತಾಲ್ಲೂಕಿನ ಕಾಳಾಪುರದ ನೆರೆ ಸಂತ್ರಸ್ತರಿಗೆ ನಿರ್ಮಿಸಿದ 303 ಮನೆಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನೆರೆ ಸಂತ್ರಸ್ತರಿಗೆ ರಾಜ್ಯದಲ್ಲಿ 58 ಸಾವಿರ ಮನೆ ನಿರ್ಮಾಣ ದೂರದೃಷ್ಟಿ ಯೋಜನೆ ಮುಖ್ಯಮಂತ್ರಿಯವರದ್ದು.ಜಿಲ್ಲೆಯಲ್ಲಿ 13 ಸಾವಿರ ಮನೆ ನಿರ್ಮಿಸಲಾಗುತ್ತಿದೆ.ಇದನ್ನು ಸಹಿಸದ ವಿರೋಧ ಪಕ್ಷಗಳು ಅಸಹಕಾರ ತೋರುತ್ತಿವೆ.ಈ ಸರ್ಕಾರ ಕಾಯಂ ಉಳಿದೀತು ಎಂಬ ಭಯದಲ್ಲಿ ಇಲ್ಲಸಲ್ಲದ ಹೇಳಿಕೆ ನೀಡುತ್ತಿವೆ ಎಂದು ಹೇಳಿದರು.
ರಾಯಚೂರು ಜಿಲ್ಲೆ ಅಭಿವೃದ್ಧಿಗೆ ಅಗತ್ಯವಾದ ಎಲ್ಲ ರೀತಿಯ ಸಹಕಾರ ನೀಡುವ ಭರವಸೆಯನ್ನು ಮುಖ್ಯಮಂತ್ರಿ ನೀಡಿದ್ದಾರೆ. ಮುಖ್ಯವಾಗಿ ಶಿಕ್ಷಣ, ಕುಡಿಯುವ ನೀರು, ಮೂಲ ಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ತಿಳಿಸಿದರು.
ವಸತಿ ಖಾತೆ ಸಚಿವ ವಿ ಸೋಮಣ್ಣ, ಸಂಸದ ಎಸ್ ಪಕ್ಕೀರಪ್ಪ, ಶಾಸಕರಾದ ರಾಯಪ್ಪ ನಾಯಕ, ಸಯ್ಯದ್ ಯಾಸಿನ್, ಪ್ರತಾಪಗೌಡ ಪಾಟೀಲ, ಎನ್ ಶಂಕರಪ್ಪ, ತುಂಗಭದ್ರ ಕಾಡಾ ಅಧ್ಯಕ್ಷ ಬಸವನಗೌಡ ಬ್ಯಾಗವಾಟ, ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಹರವಿ ಶಂಕರಗೌಡ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಶೇಖರ ರೆಡ್ಡಿ, ಯರಗೇರಾ ಗ್ರಾ.ಪಂ. ಅಧ್ಯಕ್ಷೆ ರೆಹಾನಾ ಬೇಗಂ, ಜಿಲ್ಲಾಧಿಕಾರಿ ವಿ ಅನ್ಬುಕುಮಾರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ವಿಜಯಕುಮಾರ ವೇದಿಕೆಯಲ್ಲಿದ್ದರು.