ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೀಡಿಂಗ್‌ ರೂಮ್‌: ರಾಮನ್‌

Last Updated 11 ಡಿಸೆಂಬರ್ 2018, 19:30 IST
ಅಕ್ಷರ ಗಾತ್ರ

‘ಚಂದ್ರಶೇಖರ ವೆಂಕಟ ರಾಮನ್‌ (ಸಿ. ವಿ. ರಾಮನ್‌) ಭಾರತದ ಪ್ರತಿಭಾವಂತ ಪುತ್ರರಲ್ಲೊಬ್ಬರು. ಭಾರತ ಇನ್ನೂ ದಾಸ್ಯದಲ್ಲಿ ತೊಳಲುತ್ತಿದ್ದ ಕಾಲದಲ್ಲಿ ತಮ್ಮ ವೈಜ್ಞಾನಿಕ ಸಂಶೋಧನೆಗಳ ಬಲದಿಂದ, ಪ್ರಪಂಚದ ದೃಷ್ಟಿಯನ್ನೆ ನಮ್ಮ ದೇಶದತ್ತ ಸೆಳೆದವರು. ಅವರಿಗೆ ವಿಜ್ಞಾನವೆನ್ನುವುದು ಸಾಹಸದ ಕೆಲಸವಾಗಿದ್ದದ್ದೇ ಅಲ್ಲದೆ ಅತ್ಯಂತ ಸಂತೋಷವನ್ನು ಕೊಡುವ ಹವ್ಯಾಸವೂ ಆಗಿತ್ತು. ಆ ಬಗೆಯ ಜೀವನವನ್ನೇ ಅವರು ಅರಿತಿದ್ದದ್ದು, ಹದಿನೈದು ವರ್ಷ ವಯಸ್ಸಿನಿಂದ ಹಿಡಿದು ತೀರಿಕೊಳ್ಳುವ ಕೊನೆಯ ದಿವಸದ ವರೆಗೆ ಅದೊಂದು ವೃತ್ತಿಯನ್ನೇ ಬಲವಾಗಿ ಹಿಡಿದು ಸಾಧಿಸಿದರು.

‘ರಾಮನ್‌ ಹುಟ್ಟಿದ್ದು ತಮಿಳುನಾಡಿನಲ್ಲಾದರೂ, ಕೆಲಸ ಮಾಡಿದ್ದು ಬಂಗಾಳದಲ್ಲಾದರೂ, ಕರ್ನಾಟಕರಾಜ್ಯವನ್ನು ಕಂಡರೆ ಅವರಿಗೆ ಅವರ್ಣನೀಯವಾದ ಆಕರ್ಷಣೆಯಿತ್ತು. ಆ ಕಾರಣದಿಂದಲೇ ರಾಮನ್‌ ತಮ್ಮ ಪರಿಣಾಮವನ್ನು ಹೊರಗೆಡಹಲು ದೂರಾದ ಊರಾದ ಕಲಕತ್ತ ನಗರವನ್ನು ಬಿಟ್ಟು ಬೆಂಗಳೂರಿಗೆ ಬಂದು ಸೆಂಟ್ರಲ್‌ ಕಾಲೇಜಿನಲ್ಲಿ ಪ್ರಕಟಪಡಿಸಿದರು. ತಮ್ಮ ಜೀವನದ ಅರ್ಧಭಾಗವನ್ನೆ ಈ ರಾಜ್ಯದಲ್ಲಿ ಕಳೆಯಲು ನಿರ್ಧರಿಸಿದರು. ಈ ರಾಜ್ಯವನ್ನೂ ಇಲ್ಲಿನ ಜನತೆಯನ್ನೂ ಇಲ್ಲಿಯ ಗ್ರಾಮಾಂತರ ಪ್ರದೇಶದ ಸೌಂದರ್ಯವನ್ನೂ ಭೌ್ಯಪರ್ವತಗಳನ್ನೂ ಖ್ಯಾತ ಮಹಾರಾಜರುಗಳನ್ನೂ ಕ್ರಿಯಾಶೀಲ ದಿವಾನರುಗಳನ್ನೂ ಪ್ರೀತಿಯಿಂದ ಕಂಡರು. ಅವರ ಪಾಲಿಗೆ ಬೆಂಗಳೂರಿನಂಥ ನಗರ ಪ್ರಪಂಚದಲ್ಲಿ ಬೇರೊಂದಿಲ್ಲವೆನಿಸಿತ್ತು.

‘ಕನ್ನಡದ ಜನತೆ ಈಗ ರಾಮನ್‌ ಅವರ ಹೊಸ ಮಾದರಿಯ ಜೀವನಚರಿತ್ರೆಯನ್ನು ಓದಬಹುದಾಗಿದೆ. ಇದುವರೆಗೂ ಗೊತ್ತಿಲ್ಲದೆ ಇದ್ದ ರಾಮನ್‌ ಅವರ ಬಾಳಿನ ಪ್ರಸಂಗಗಳನ್ನು ಈಗ ತಿಳಿಯಬಹುದು. ಈ ಜೀವನಚಿತ್ರವನ್ನು ಬರೆದವರು ಬಿ. ಪಿ. ರಾಧಾಕೃಷ್ಣ. ರಾಧಾಕೃಷ್ಣ ಅವರು ಈ ಜೀವನಚಿತ್ರವನ್ನು ಯುವಕರಿಗಾಗಿ ಬರೆದಿದ್ದಾರೆ. ಅವರುಇದನ್ನು ಓದಿದಾಗ ಅವರಲ್ಲಿ ವಿಜ್ಞಾನದಲ್ಲಿ ಉತ್ಸಾಹ ಮೂಡುತ್ತದೆ.’

ಈ ಮಾತುಗಳು ಎಸ್‌. ರಾಮಶೇಷನ್‌ ಅವರವು; ಬಿ. ಪಿ. ರಾಧಾಕೃಷ್ಣ ಅವರ ‘ರಾಮನ್‌’ ಕೃತಿಗೆ ಬರೆದಿರುವ ಮುನ್ನುಡಿಯಲ್ಲಿಯ ವಾಕ್ಯಗಳು.

ಭಾರತೀಯ ವಿಜ್ಞಾನದ ಇತಿಹಾಸದಲ್ಲಿ ಸಿ. ವಿ. ರಾಮನ್‌ ಅವರ ಹೆಸರು ತುಂಬ ದೊಡ್ಡದು. ಭಾರತಕ್ಕೆ ವಿಜ್ಞಾನದಲ್ಲಿ ಮೊದಲ ನೊಬೆಲ್‌ ಪ್ರಶಸ್ತಿಯನ್ನು ತಂದುಕೊಟ್ಟವರು ಅವರು ಎನ್ನುವುದಷ್ಟೆ ಅವರ ಹಿರಿಮೆಯಲ್ಲ; ನಮ್ಮ ದೇಶದಲ್ಲಿ ವಿಜ್ಞಾನಕ್ಕೆ ಗಟ್ಟಿಯಾದ ಬುನಾದಿಯನ್ನು ಹಾಕಿದವರಲ್ಲಿ ಪ್ರಮುಖರು ಅವರು. ಹೀಗಾಗಿ ಅವರ ಜೀವನಚರಿತ್ರೆ ಎಂದರೆ ಅದು ಭಾರತೀಯ ವಿಜ್ಞಾನದ ಇತಿಹಾಸವೂ ಆಗುತ್ತದೆ; ಭಾರತೀಯ ಪ್ರತಿಭಾ ಪರಂಪರೆಯ ಪರಿಚಯವೂ ಆಗುತ್ತದೆ. ಇಂಥ ಮಹಾವಿಜ್ಞಾನಿಯ ಬದುಕನ್ನು ಕುರಿತು ಬಿ. ಪಿ. ರಾಧಾಕೃಷ್ಣ ಅವರು ರಚಿಸಿರುವ ಜೀವನಚರಿತ್ರೆ ತುಂಬ ಮೌಲಿಕವಾಗಿದೆ; ಯುವಜನತೆಗೆ ಸ್ಫೂರ್ತಿದಾಯಕವೂ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT