ಹರಪನಹಳ್ಳಿ: ಮೋದಿ ಮತ್ತೆ ಪ್ರಧಾನಿ ಆದರೆ ನಮ್ಮ ಆಟ ನಡೆಯುವುದಿಲ್ಲ ಎಂದು ವಿರೋಧ ಪಕ್ಷಗಳು ಷಡ್ಯಂತರ ರೂಪಿಸಲು ಸಜ್ಜಾಗಿವೆ’ ಎಂದು ಶಾಸಕ ಬಸವನಗೌಡ ಪಾಟೀಲ ಯತ್ನಾಳ್ ಆರೋಪಿಸಿದರು.
ಪ್ರತಿಯೊಂದಕ್ಕೂ ವಿರೋಧ ಪಕ್ಷಗಳು ಸಾಕ್ಷಿ ಕೇಳುತ್ತಿವೆ. ಸರ್ಜಿಕಲ್ ದಾಳಿ ಬಗ್ಗೆ ಮಾಹಿತಿ ಕೇಳುತ್ತವೆ. ಸೇನೆ ಜತೆ ವಿರೋಧ ಪಕ್ಷದ ನಾಯಕರನ್ನು ಕರೆದುಕೊಂಡು ಹೋಗಿ ಸತ್ತವರ ಲೆಕ್ಕ ಹಾಕಿಕೊಂಡು ಬನ್ನಿ ಎಂದು ಹೇಳಬೇಕಿತ್ತು. ಆಗ ಅವರಿಗೆ ಸತ್ಯದ ಅರಿವಾಗುತ್ತಿತ್ತು ಎಂದು ದೂರಿದರು.
‘ಇದು ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲ. ಇದು ದೇಶದ ಭವಿಷ್ಯ ರೂಪಿಸುವ ಚುನಾವಣೆ. ದೇಶ ಉಳಿದರೆ ಜನ ಉಳಿಯುತ್ತಾರೆ. ಜನರ ಹಿತಕ್ಕಾಗಿ ಪ್ರಧಾನಿ ಮೋದಿ ದೇಶಕ್ಕೆ, ದಾವಣಗೆರೆಗೆ ಸಿದ್ದೇಶ್ವರ ಅಗತ್ಯ. ಬಿಜೆಪಿಗೆ ಮತ ನೀಡಿ’ ಎಂದು ಮನವಿ ಮಾಡಿದರು.
ಶಾಸಕ ಜಿ.ಕರುಣಾಕರರೆಡ್ಡಿ, ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿದರು. ಪುರಸಭಾ ಮಾಜಿ ಅಧ್ಯಕ್ಷ ಎಚ್.ಕೆ. ಹಾಲೇಶ, ಬಿಜೆಪಿ ತಾಲೂಕು ಅಧ್ಯಕ್ಷ ಸತ್ತೂರು ಹಾಲೇಶ, ಮುಖಂಡರಾದ ಎಂ.ಪಿ.ನಾಯ್ಕ, ಸಣ್ಣ ಹಾಲಪ್ಪ, ಬಿ.ವೈ.ವೆಂಕಟೇಶನಾಯ್ಕ, ಯು.ಪಿ.ನಾಗರಾಜ, ಸಂತೋಷ, ಲಿಂಬ್ಯಾನಾಯ್ಕ ಇದ್ದರು.