ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ - 2024 | ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಒಳ ಏಟಿನ ಮಾತು

ಎಂಟೂ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದೊಂದು ಲೆಕ್ಕಾಚಾರ
Published 14 ಏಪ್ರಿಲ್ 2024, 4:46 IST
Last Updated 14 ಏಪ್ರಿಲ್ 2024, 4:46 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಚುನಾವಣಾ ಪ್ರಚಾರ ರಂಗೇರುತ್ತಿದೆ. ಕಾಂಗ್ರೆಸ್ ಮತ್ತು ಬಿಜೆಪಿ– ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗಳು ಕಾಲಿಗೆ ಚಕ್ರಕಟ್ಟಿಕೊಂಡವರಂತೆ ಹಳ್ಳಿ, ಹೋಬಳಿ, ನಗರಗಳಲ್ಲಿ ಮತ ಕೇಳುತ್ತಿದ್ದಾರೆ. ಸಭೆಗಳನ್ನು ನಡೆಸುತ್ತಿದ್ದಾರೆ. 

ಈ ಪ್ರಚಾರದ ನಡುವೆಯೇ ಲೋಕಸಭಾ ಕ್ಷೇತ್ರದಲ್ಲಿ ಒಳ ಏಟಿನ ಮಾತುಗಳು ಜೋರಾಗಿ ಕೇಳಿ ಬರುತ್ತಿವೆ. ಇಬ್ಬರೂ ಅಭ್ಯರ್ಥಿಗಳಿಗೆ ಒಳ ಏಟಿದೆ. ಅದು ಯಾವ ರೀತಿಯಲ್ಲಿ, ಯಾವ ಕ್ಷೇತ್ರದಲ್ಲಿ, ಹೇಗೆ ಎನ್ನುವ ಕ್ಷೇತ್ರದಲ್ಲಿ ಚರ್ಚೆಗಳು ರಾಜಕೀಯ ವಲಯದಲ್ಲಿ ಜೋರಾಗಿವೆ. 

ಬಿಜೆಪಿಗೆ ಎಲ್ಲಿ, ಹೇಗೆ ಒಳ ಏಟುಗಳು ಬೀಳಲಿವೆ ಎಂದು ಕಾಂಗ್ರೆಸ್‌ ನಾಯಕರು, ಕಾರ್ಯಕರ್ತರು ತಮ್ಮದೇ ಆದ ವಿಶ್ಲೇಷಣೆಗಳನ್ನು ಮಾಡುತ್ತಿದ್ದರೆ, ಬಿಜೆಪಿ ಮತ್ತು ಜೆಡಿಎಸ್ ನಾಯಕರು ಸಹ ಕಾಂಗ್ರೆಸ್‌ಗೆ ಎಲ್ಲಿ, ಯಾವ ರೀತಿ ಒಳ ಏಟು ಇದೆ ಎನ್ನುವ ಬಗ್ಗೆ ಮಾತನಾಡುತ್ತಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆಯ ಸಮಯದಲ್ಲಿಯೂ ಜಿಲ್ಲೆಯ ಬಹುತೇಕ ಕ್ಷೇತ್ರಗಳಲ್ಲಿ ಈ ಒಳ ಏಟಿನ ಚರ್ಚೆಗಳು ಜೋರಾಗಿದ್ದವು. ಈ ಬಾರಿಯೂ ಸಹ ಈ ಚರ್ಚೆಗಳು ಗರಿಗೆದರಿವೆ. 

ವಿಶೇಷವಾಗಿ ಗೌರಿಬಿದನೂರು, ಯಲಹಂಕ, ಚಿಕ್ಕಬಳ್ಳಾಪುರ, ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರಗಳಲ್ಲಿ ಈ ಒಳ ಏಟಿನ ಮಾತುಗಳು ಜೋರಾಗಿ ಕೇಳಿ ಬರುತ್ತಿವೆ.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಾಳಯವನ್ನು ಒಮ್ಮೆ ಇಣುಕಿದರೆ ಒಡಕುಗಳ ದರ್ಶನವಾಗುತ್ತದೆ. ಕಾಂಗ್ರೆಸ್‌ ನಾಯಕರು ಇತ್ತೀಚೆಗೆ ನಗರದಲ್ಲಿ ನಡೆಸಿದ ‌ಸುದ್ದಿಗೋಷ್ಠಿ ಸಮಯದಲ್ಲಿಯೇ ಹಿರಿಯ ಮುಖಂಡ ನಂದಿ ಆಂಜನಪ್ಪ, ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಆಂಜನಪ್ಪ ಬಹಿರಂಗವಾಗಿ ಮಾತನಾಡಿದರೆ ಕೆಲವು ನಾಯಕರು ಆಂತರಿಕವಾಗಿ ಕಾಂಗ್ರೆಸ್ ಬೆಳವಣಿಗೆಗಳ ಬಗ್ಗೆ ಬೇಸರ ವ್ಯಕ್ತಪಡಿಸುವರು. ವಿಧಾನಸಭೆ ಚುನಾವಣೆ ಸಮಯದಲ್ಲಿ ಇದ್ದ ಒಗ್ಗಟ್ಟು ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಈಗ ಇಲ್ಲ ಎನ್ನುವುದು ಜಗಜ್ಜಾಹೀರ. 

ಗೌರಿಬಿದನೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ, ಜೆಡಿಎಸ್ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಕೆಂಪರಾಜು ಈಗ ಒಂದೇ ತೆಕ್ಕೆಯಲ್ಲಿ ಇದ್ದಾರೆ. ಮತ್ತೊಂದು ಕಡೆ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಮತ್ತು ಮಾಜಿ ಸಚಿವ ಎನ್‌.ಎಚ್.ಶಿವಶಂಕರ ರೆಡ್ಡಿ ಒಂದೇ ವೇದಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಪರ ಪ್ರಚಾರ ನಡೆಸುತ್ತಿದ್ದಾರೆ. ಗೌರಿಬಿದನೂರಿನಲ್ಲಿ ಮುಖಂಡರು ಮತ್ತು ಕಾರ್ಯಕರ್ತರು ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಜಿಗಿಯುವ ಪರ್ವ ಜೋರಾಗಿಯೇ ಇದೆ.  

ಬಿಜೆಪಿ ರಾಜ್ಯ ಕಾರ್ಯದರ್ಶಿಯೂ ಆದ ಬಾಗೇಪಲ್ಲಿ ಮುಖಂಡ ಮುನಿರಾಜು, ಎಸ್‌.ಆರ್.ವಿಶ್ವನಾಥ್‌ ಬಣದಲ್ಲಿ ಗುರುತಿಸಿಕೊಂಡಿದ್ದರು. ಸುಧಾಕರ್ ಅವರಿಗೆ ಟಿಕೆಟ್ ದೊರೆತ ನಂತರ ಒಗ್ಗೂಡಿದರು. ಆದರೆ ಈ ಕ್ಷೇತ್ರದಲ್ಲಿಯೂ ಬಿಜೆಪಿಗೆ ಒಳ ಏಟು ಇದೆಯೇ ಎನ್ನುವ ಚರ್ಚೆ ಬಿರುಸಾಗಿದೆ.

ಕ್ಷೇತ್ರದಲ್ಲಿ ಗಣನೀಯವಾಗಿರುವ ಬಲಿಜ ಸಮುದಾಯದ ಹೆಚ್ಚು ಮತಗಳು ವಿಧಾನಸಭೆ ಚುನಾವಣೆಯಲ್ಲಿ ಮುನಿರಾಜು ಅವರ ಪರವಾಲಿದ್ದವು. ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಅವರು ಬಲಿಜ ಸಮುದಾಯಕ್ಕೆ ಸೇರಿದ್ದಾರೆ. ಕಳೆದ  ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ದೊರೆತ ಸಮುದಾಯದ ಬೆಂಬಲ ಈ ಬಾರಿ ದೊರೆಯುವುದು ಕಷ್ಟ ಎನ್ನುವ ಮಾತುಗಳಿವೆ. 

ಬಾಗೇಪಲ್ಲಿ ಕ್ಷೇತ್ರದ ಬಹುತೇಕ ಒಕ್ಕಲಿಗ ಮುಖಂಡರು ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದಾರೆ. ಜಾತಿ ಪ್ರಜ್ಞೆ ಜೋರಾದಷ್ಟು ಈ ಕ್ಷೇತ್ರದಲ್ಲಿ ಮತದಾರರು ಅದಲು ಬದಲಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಕಳೆದ ಲೋಕಸಭೆ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಬಿಜೆಪಿಗೆ 69,387 ಮತಗಳನ್ನು ಪಡೆದಿತ್ತು.

ವಿಶ್ವನಾಥ್ ಮುನಿಸು; ಕಾಂಗ್ರೆಸ್ ಆಸೆಗಣ್ಣು
ಡಾ.ಕೆ.ಸುಧಾಕರ್ ಅಭ್ಯರ್ಥಿಯಾದ ನಂತರ ಯಲಹಂಕ ಬಿಜೆಪಿ ಶಾಸಕ ಎಸ್‌.ಆರ್.ವಿಶ್ವನಾಥ್ ಅವರು ಮಾತುಗಳು ತೀವ್ರ ಚರ್ಚೆಗೆ ಕಾರಣವಾಗಿತ್ತು.  ಸುಧಾಕರ್ ವಿಶ್ವನಾಥ್ ಅವರ ಮನೆ ಬಳಿ ಹೋಗಿದ್ದರೂ ಭೇಟಿ ಸಾಧ್ಯವಾಗಿರಲಿಲ್ಲ. ನಂತರ ವರಿಷ್ಠರ ಸಮ್ಮುಖದಲ್ಲಿ ಸಂಧಾನ ನಡೆಯಿತು. ಪರಸ್ಪರ ಕೈ ಕುಲುಕಿದ್ದರು. ಈ ಬೆಳವಣಿಗೆಗಳು ನಡೆದು ಸ್ವಲ್ಪ ದಿನಕ್ಕೆ ವಿಶ್ವನಾಥ್ ‘ನಾವು ಮೋದಿ ಅವರ ಹೆಸರಿನಲ್ಲಿ ಮತ ಕೇಳುತ್ತೇವೆ. ಸುಧಾಕರ್‌ಗೆ ನಮ್ಮ ಮೇಲೆ ಅನುಮಾನ ಬೇಡ’ ಎಂದರು. ಮತ್ತೆ ಕಾರ್ಯಕರ್ತರಲ್ಲಿ ಗೊಂದಲಗಳು ಮೂಡಿದವು.  ಈ ಹಿಂದಿನ ಚುನಾವಣೆಗಳಲ್ಲಿ ವಿಶ್ವನಾಥ್ ಅವರನ್ನೇ ಬಿಜೆಪಿ  ಚಿಕ್ಕಬಳ್ಳಾ‍ಪುರ ಲೋಕಸಭಾ ಕ್ಷೇತ್ರದ ಉಸ್ತುವಾರಿಯಾಗಿ ನೇಮಿಸಿತ್ತು. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಚ್ಚೇಗೌಡ ಅವರಿಗೆ ಯಲಹಂಕ ಕ್ಷೇತ್ರದಲ್ಲಿ 1.50 ಲಕ್ಷ ಮತಗಳು ದೊರೆತಿದ್ದವು. 75 ಸಾವಿತ ಮತಗಳ ಮುನ್ನಡೆ ಪಡೆದಿದ್ದರು. ಸುಧಾಕರ್ ಮತ್ತು ವಿಶ್ವನಾಥ್ ಒಗ್ಗೂಡಿ ಯಲಹಂಕದಲ್ಲಿ ಪ್ರಚಾರ ಸಭೆಗಳನ್ನು ನಡೆಸಿದ್ದಾರೆ. ಕಾಂಗ್ರೆಸ್ ನಾಯಕರ ನಡುವಿನ ರಾಜಕೀಯ ಚರ್ಚೆ ವೇಳೆ ವಿಶ್ವನಾಥ್ ಮುನಿಸಿನ ಬಗ್ಗೆಯೂ ಪ್ರಸ್ತಾಪವಾಗುತ್ತಿದೆ. ಯಲಹಂಕದಲ್ಲಿ ಬಿಜೆಪಿಗೆ ಒಳ ಏಟು ಬೀಳಲಿದೆ ಎನ್ನುವ ನಂಬಿಕೆ ಕಾಂಗ್ರೆಸ್‌ನವರದ್ದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT