ಯಡಿಯೂರಪ್ಪ ಸತ್ವ ಪರೀಕ್ಷೆಗೆ ಈ ಚುನಾವಣೆಯನ್ನು ಬಿಡಲಾಗಿದೆ. ಅದರ ಜತೆಗೆ, ಯಡಿಯೂರಪ್ಪ ಅವರನ್ನು ಶಿವಮೊಗ್ಗದಲ್ಲೇ ಕಟ್ಟಿ ಹಾಕುವುದು; ಜತೆಗೆ ಬಿ.ವೈ. ವಿಜಯೇಂದ್ರ ಅವರ ಸಾಮರ್ಥ್ಯವನ್ನು ಪರೀಕ್ಷೆಗೆ ಒಡ್ಡಲು ಈ ಚುನಾವಣೆ ಬಳಸಿಕೊಳ್ಳುವುದು ಪಕ್ಷದ ವರಿಷ್ಠರ ಇರಾದೆ. ಇದು ಬಿಜೆಪಿಯ ‘ಗರ್ಭಗುಡಿ’ಯಲ್ಲಿನ ಗಹನವಾದ ಚರ್ಚೆ. ಅಭ್ಯರ್ಥಿ ಘೋಷಣೆಯಾದ ಕ್ಷೇತ್ರಗಳ ಪೈಕಿ, ಎಂಟು ಕ್ಷೇತ್ರಗಳಲ್ಲಿ ಬಿಜೆಪಿ ಬಂಡಾಯದ ಬೇಗೆ ಎದುರಿಸುತ್ತಿದೆ. ಅದರಲ್ಲೂ, ಯಡಿಯೂರಪ್ಪನವರ ಶಕ್ತಿಕೇಂದ್ರದಲ್ಲಿ ಅವರ ಒಂದು ಕಾಲದ ಆಪ್ತ, ಹಿಂದುತ್ವದ ಉಗ್ರ ಪ್ರತಿಪಾದಕ ಕೆ.ಎಸ್. ಈಶ್ವರಪ್ಪ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವುದಾಗಿ ಘೋಷಿಸಿದ್ದಾರೆ. ಬ್ರಹ್ಮ ಬಂದರೂ ಹಿಂದೆ ಸರಿಯುವುದಿಲ್ಲ ಎಂದೂ ಹೇಳಿದ್ದಾರೆ. ಹಿಂದುತ್ವವಾದಿ ಈಶ್ವರಪ್ಪ ಹೀಗೆ ಘಂಟಾಘೋಷವಾಗಿ ಅಬ್ಬರಿಸಲು, ಅವರ ಹಿಂದೆ ‘ಸಂಘ’ದ ಕಟ್ಟಾಳುಗಳೇ ಇದ್ದಾರೆ ಎಂಬ ಅಂತೆ ಕಂತೆಗಳೂ ಶಿವಮೊಗ್ಗದ ಬಿಬಿ ಸ್ಟ್ರೀಟ್ನಲ್ಲಿ (ದೊಡ್ಡ ಬ್ರಾಹ್ಮಣರ ಬೀದಿ) ಹರಿದಾಡುತ್ತಿವೆ. ಇದರ ಹಿಂದಿನ ಏಕೈಕ ಉದ್ದೇಶವೆಂದರೆ, ಶಿವಮೊಗ್ಗ ಬಿಟ್ಟು ಉಳಿದ 27 ಕ್ಷೇತ್ರಗಳ ಕಡೆ ಯಡಿಯೂರಪ್ಪ ಹೆಚ್ಚು ಓಡಾಡದಂತೆ ಕಟ್ಟಿ ಹಾಕುವುದು; ಎಲ್ಲ ಬಲ ಬಳಸಿ ರಾಘವೇಂದ್ರರನ್ನು ಸೋಲಿಸುವುದು. ಅಲ್ಲಿಗೆ ಯಡಿಯೂರಪ್ಪ ಶಕ್ತಿ ದುರ್ಬಲವಾಗಿದೆ ಎಂದೂ ತೋರಿಸಿದಂತಾಗುತ್ತದೆ. ಸ್ವಕ್ಷೇತ್ರದಲ್ಲಿ ಅಣ್ಣನನ್ನೇ ಗೆಲ್ಲಿಸಿಕೊಳ್ಳಲಾಗಲಿಲ್ಲ ಎಂಬ ಹಣೆಪಟ್ಟಿಯನ್ನು ವಿಜಯೇಂದ್ರಗೆ ಕಟ್ಟಿದಂತೆಯೂ ಆಗುತ್ತದೆ; ಇದು ಅಸಲು ಲೆಕ್ಕಾಚಾರವಂತೆ...