ಛತ್ತೀಸಗಢ: ಇಲ್ಲಿನ ಬಸ್ತರ್ ಲೋಕಸಭಾ ಕ್ಷೇತ್ರದಲ್ಲಿ ನಕ್ಸಲರು ಇಟ್ಟಿದ್ದ ಕಚ್ಚಾ ಬಾಂಬ್ ಸ್ಫೋಟಗೊಂಡ ಪರಿಣಾಮ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಯಾಗಿದ್ದ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) ಯೋಧರೊಬ್ಬರು ಗಾಯಗೊಂಡಿದ್ದಾರೆ.
ಬಿಜಾಪುರ ಜಿಲ್ಲೆಯ ಬೈರಮಗಢ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಾಂಬ್ ಸ್ಫೋಟಗೊಂಡಿದೆ. ಸಿಆರ್ಪಿಎಫ್ನ 62ನೇ ಬೆಟಾಲಿಯನ್ನ ಸಹಾಯಕ ಕಮಾಂಡಂಟ್ ಮನು ಎಚ್.ಸಿ. ಗಾಯಗೊಂಡ ಯೋಧ. ಇವರ ಕಾಲು ಮತ್ತು ಕೈಗಳಿಗೆ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದರು.
ಗ್ರನೇಡ್ ಲಾಂಚರ್ ಸ್ಫೋಟ
ಇನ್ನೊಂದೆಡೆ, ಬಿಜಾಪುರ ಜಿಲ್ಲೆಯ ಗುಲ್ಗಾಂ ಗ್ರಾಮದ ಸಮೀಪ ಬಂದೂಕಿಗೆ ಅಳವಡಿಸುವ ಗ್ರನೇಡ್ ಲಾಂಚರ್ ಆಕಸ್ಮಿಕವಾಗಿ ಸ್ಫೋಟಿಸಿದ್ದರಿಂದ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಯಾಗಿದ್ದ ಸಿಆರ್ಪಿಎಫ್ ಯೋಧರೊಬ್ಬರು ಗಾಯಗೊಂಡಿದ್ದಾರೆ.
ಗಾಯಾಳು ಸಿಆರ್ಪಿಎಫ್ನ 196ನೇ ಬೆಟಾಲಿಯನ್ನವರು. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಭದ್ರತಾ ಸಿಬ್ಬಂದಿ ಮತಗಟ್ಟೆಯಿಂದ 500 ಮೀಟರ್ ದೂರದಲ್ಲಿ ಕಣ್ಗಾವಲು ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.