ಬಲರಾಮಪುರ: ಜಾತಿ ಮತ್ತು ಧರ್ಮದ ಆಧಾರದ ಮೇಲೆ ಜನರನ್ನು ವಿಭಜಿಸಿ ದೇಶವನ್ನು ಕೊಳ್ಳೆಹೊಡೆಯಲು ಇಂಡಿಯಾ ಬಣ ಯೋಜಿಸಿದೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಆರೋಪಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಸಾಕೇತ್ ಮಿಶ್ರಾ ಪರ ಶ್ರವಸ್ತಿ ಲೋಕಸಭಾ ಕ್ಷೇತ್ರದಲ್ಲಿ ಮಂಗಳವಾರ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡು ಮಾತನಾಡಿದರು.
‘ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಬಿಜೆಪಿ ಜನರ ಸೇವೆ ಮಾಡುತ್ತಿದೆ. ನಾವು ಎಂದಿಗೂ ತಾರತಮ್ಯ ಮಾಡಿಲ್ಲ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎನ್ನುವ ತತ್ವದ ಅಡಿ ಕೆಲಸ ಮಾಡುತ್ತಿದ್ದೇವೆ. ಆದರೆ ಇಂಡಿಯಾ ಬಣ ಜಾತಿ ಮತ್ತು ಧರ್ಮದ ಮೂಲಕ ಜನರನ್ನು ಬೇರೆ ಬೇರೆ ಮಾಡಿ ದೇಶವನ್ನು ಲೂಟಿ ಮಾಡಲು ಯೋಜಿಸಿದೆ. ಅದಕ್ಕೆ ಎಂದಿಗೂ ಅವಕಾಶ ಕೊಡುವುದಿಲ್ಲ’ ಎಂದರು.
ಇಂಡಿಯಾ ಬಣದ ಉದ್ದೇಶ ಜನರಿಗೆ ಗೊತ್ತಾಗಿದೆ, ಹೀಗಾಗಿಯೇ ಮತ್ತೊಮ್ಮೆ ಮೋದಿ ಸರ್ಕಾರ ಎಂದು ಘೋಷಣೆ ಕೂಗುತ್ತಿದ್ದಾರೆ.
ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದವರು ರಾಮನ ವಿರೋಧಿಗಳು, ದೇಶ ವಿರೋಧಿಗಳೂ ಹೌದು. ಜನರು ಅವರಿಗೆ ತಕ್ಕ ಉತ್ತರ ನೀಡಿ ರಾಮನನ್ನು ಕರೆತಂದವರು ಮತ್ತೆ ಅಧಿಕಾರಕ್ಕೆ ಬರುವಂತೆ ಮಾಡುತ್ತಾರೆ ಎಂದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಜನರ ಹಕ್ಕುಗಳನ್ನು ಕಸಿಯುವ ದುರುದ್ದೇಶಪೂರಿತ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇವರಿಂದ ಆಗುತ್ತಿರುವ ಷಡ್ಯಂತ್ರದ ಬಗ್ಗೆ ನಾವೆಲ್ಲರೂ ಜಾಗೃತರಾಗಬೇಕಿದೆ. ಅಧಿಕಾರಕ್ಕೆ ಬರಲು ವಿಪಕ್ಷಗಳು ಎಲ್ಲಿಲ್ಲದ ಪ್ರಯತ್ನ ಮಾಡುತ್ತಿವೆ ಎಂದು ಕಿಡಿಕಾರಿದರು.