ಮುಂಬೈ: ಮಹಾರಾಷ್ಟ್ರದ ಕಾಂಗ್ರೆಸ್ ಹಿರಿಯ ಮುಖಂಡ ಸಂಜಯ್ ನಿರುಪಮ್ ಅವರನ್ನು ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ.
ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೋಡಗಿರುವ ಸಂಜಯ್ ಅವರನ್ನು ಉಚ್ಚಾಟನೆ ಮಾಡುವಂತೆ ಮಹಾರಾಷ್ಟ್ರ ಕಾಂಗ್ರೆಸ್ ಘಟಕವು ಹೈಕಮಾಂಡ್ಗೆ ಎರಡು ದಿನಗಳ ಹಿಂದೆ ಶಿಫಾರಸು ಮಾಡಿತ್ತು. ಈ ಕುರಿತು ಬುಧವಾರ ರಾತ್ರಿ ಹಲವು ಮುಖಂಡರ ಜೊತೆ ಚರ್ಚೆ ಮಾಡಿದ ಕಾಂಗ್ರೆಸ್ ಹೈಕಮಾಂಡ್ ಸಂಜಯ್ ಅವರನ್ನು 6 ವರ್ಷಗಳವರೆಗೆ ಉಚ್ಛಾಟನೆ ಮಾಡಿ ಆದೇಶ ಹೊರಡಿಸಿದೆ.
ನಿನ್ನೆ ಬೆಳಗ್ಗೆಯೇ ಸಂಜಯ್ ಅವರನ್ನು ‘ಸ್ಟಾರ್ ಪ್ರಚಾರಕ’ರ ಪಟ್ಟಿಯಿಂದ ಕೈಬಿಡಲಾಗಿತ್ತು.
ಶಿವಸೇನೆ (ಉದ್ಧವ್ ಬಣ) ಜತೆ ಕಾಂಗ್ರೆಸ್ ಸೀಟು ಹಂಚಿಕೆ ಬೆನ್ನಲ್ಲೇ ಅಸಮಾಧಾನ ಭುಗಿಲೆದ್ದಿತ್ತು. ವಾಯವ್ಯ ಮುಂಬೈ ಕ್ಷೇತ್ರದಿಂದ ಟಿಕೆಟ್ ವಂಚಿತರಾಗಿದ್ದ ಸಂಜಯ್, ತಮ್ಮ ಬದಲಿಗೆ ಶಿವಸೇನೆ ಅಭ್ಯರ್ಥಿಗೆ ಕಾಂಗ್ರೆಸ್ ಮಣೆ ಹಾಕಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಮುಂಬೈನ ಆರು ಕ್ಷೇತ್ರಗಳ ಪೈಕಿ ಶಿವಸೇನೆಗೆ ಐದು ಸ್ಥಾನಗಳನ್ನು ಬಿಟ್ಟುಕೊಡಲಾಗಿದೆ. ಕಾಂಗ್ರೆಸ್ಗೆ ಕೇವಲ ಒಂದು ಸ್ಥಾನವನ್ನು ಮಾತ್ರ ನೀಡಲಾಗಿದೆ. ಇದರಿಂದ ಕಾಂಗ್ರೆಸ್ನಲ್ಲಿ ಅಸಮಾಧಾನ ಉಂಟಾಗಿದೆ.