ಬದಾಂಯೂ, ಉತ್ತರ ಪ್ರದೇಶ: ಉತ್ತರ ಪ್ರದೇಶದ ಜಸ್ವಂತ್ನಗರ ಶಾಸಕ ಹಾಗೂ ಸಮಾಜವಾದಿ ಪಕ್ಷದ ಅಭ್ಯರ್ಥಿ ಶಿವಪಾಲ್ ಯಾದವ್ ಅವರು ಮತದಾರರಿಗೆ ‘ಎಚ್ಚರಿಕೆ’ ನೀಡಿದ್ದಾರೆ ಎನ್ನಲಾದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
‘ನಾವು ಎಲ್ಲರ ಮತಗಳನ್ನೂ ಕೇಳುತ್ತೇವೆ. ನೀವು ನಮಗೆ ಮತ ಹಾಕಿದರೆ, ಎಲ್ಲವೂ ನೆಟ್ಟಗಿರುತ್ತದೆ. ಇಲ್ಲದಿದ್ದರೆ, ಅದರ ಬಗ್ಗೆ ಮುಂದೆ ವಿಚಾರಿಸಿಕೊಳ್ಳುತ್ತೇವೆ’ ಎಂದು ಶಿವಪಾಲ್ ಹೇಳಿರುವುದು ವಿಡಿಯೊದಲ್ಲಿ ದಾಖಲಾಗಿದೆ.
ಯಾವಾಗ, ಎಲ್ಲಿ ಈ ಹೇಳಿಕೆ ನೀಡಿದ್ದಾರೆ ಎನ್ನುವುದು ಸ್ಪಷ್ಟವಿಲ್ಲ. ಆದರೆ, ಶಿವಪಾಲ್ ಯಾದವ್ ಅವರೊಂದಿಗೆ ಅವರ ಮಗ ಹಾಗೂ ಸಹಸ್ವಾನ್ ಕ್ಷೇತ್ರದ ಶಾಸಕ, ಸಮಾಜವಾದಿ ಪಕ್ಷದ ಮುಖಂಡ ಬೃಜೇಶ್ ಯಾದವ್ ಕೂಡ ವೇದಿಕೆಯಲ್ಲಿ ಆಸೀನಾಗಿರುವ ದೃಶ್ಯ ವಿಡಿಯೊದಲ್ಲಿದೆ.
ವಿಡಿಯೊ ಬಗ್ಗೆ ಪಿಟಿಐ ಸುದ್ದಿಸಂಸ್ಥೆ ಜತೆಗೆ ಮಾತನಾಡಿದ ಬೃಜೇಶ್ ಯಾದವ್, ‘ವಿಡಿಯೊದಲ್ಲಿನ ಮಾತುಗಳನ್ನು ತಿರುಚಲಾಗಿದೆ. ಇದು ಮಾರ್ಚ್ 15ರ ವಿಡಿಯೊ ಆಗಿದ್ದು, ಶಿವಪಾಲ್ ಯಾದವ್ ಅಂದು ಗುನ್ನೌರ್ ಕಡೆಗೆ ಹೊರಟಿದ್ದರು. ಬದಾಂಯೂ ಜಿಲ್ಲೆಯ ಬಿಲ್ಸಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅವರು ಹೇಳಿಕೆ ನೀಡಿದರು’ ಎಂದು ತಿಳಿಸಿದ್ದಾರೆ.
ಬದಾಂಯೂ ಜಿಲ್ಲಾಧಿಕಾರಿ ಮನೋಜ್ ಕುಮಾರ್ ಮಾತನಾಡಿ, ‘ಉತ್ತರ ಪ್ರದೇಶದ ಮುಖ್ಯ ಚುನಾವಣಾಧಿಕಾರಿ ಕಚೇರಿಯಿಂದ ವಿಡಿಯೊ ಬಗ್ಗೆ ಮಾಹಿತಿ ಕೇಳಿದ್ದೇವೆ. ವಿಡಿಯೊದಲ್ಲಿರುವ ದೃಶ್ಯದ ಬಗ್ಗೆ ತನಿಖೆ ನಡೆಸಿ, ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಹೇಳಿದರು.