ಕಲಬುರಗಿ: ಬಜರಂಗದಳವನ್ನು ನಿಷೇಧಿಸುವುದಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿದ್ದನ್ನು ಖಂಡಿಸಿದ ಶಾಸಕ ಕೆ.ಎಸ್. ಈಶ್ವರಪ್ಪ ಅವರು ಕಾಂಗ್ರೆಸ್ ಪ್ರಣಾಳಿಕೆಯ ಪ್ರತಿಗೆ ಬೆಂಕಿ ಹಚ್ಚಿ ಸುಟ್ಟ ಘಟನೆ ಗುರುವಾರ ನಡೆಯಿತು.
ನಗರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಪ್ರಣಾಳಿಕೆ ಪ್ರತಿ ಸುಟ್ಟು ಮಾತನಾಡಿದ ಅವರು, ‘ಬಜರಂಗದಳ ನಿಷೇಧ ಮಾಡುತ್ತೇವೆ ಎಂದಿದ್ದಕ್ಕೆ ಹಿಂದೂಗಳಿಗೆ ನೋವಾಗಿದೆ. ಕಾಂಗ್ರೆಸಿಗರ ಮನಸ್ಥಿತಿ ರಾಜ್ಯದ ಜನರಿಗೆ ಗೋತ್ತಾಗಿದೆ’ ಎಂದರು.
‘ಎಲ್ಲ ಮುಸ್ಲಿಮರು ಒಂದೇ ತರಹ ಇರುವುದಿಲ್ಲ. ಕೆಲವು ಮುಸ್ಲಿಮರು ಕಾಂಗ್ರೆಸ್ ವಿರುದ್ಧವಾಗಿದ್ದಾರೆ. ಇದು ಮುಸ್ಲಿಂ ಲಿಗ್ನ ಪ್ರಣಾಳಿಕೆ, ಮುಹಮ್ಮದ್ ಅಲಿ ಜಿನ್ನಾರ ಪ್ರಣಾಳಿಕೆ. ಬಜರಂಗದಳ ನಿಷೇಧಿಸುವ ಮೂಲಕ ಕಾಂಗ್ರೆಸ್ ಮುಸ್ಲಿಮರ ತುಷ್ಟೀಕರಣ ಮಾಡಲು ಹೊರಟಿದೆ’ ಎಂದು ಆರೋಪಿಸಿದರು.
‘ಎಲ್ಲಾ ರಾಷ್ಟ್ರಭಕ್ತ ನಾಗರಿಕರು ರಾಷ್ಟ್ರದ್ರೋಹಿ ಕಾಂಗ್ರೆಸ್ ಪ್ರಣಾಳಿಕೆಯನ್ನು ಬಹಿಷ್ಕರಿಸಬೇಕು’ ಎಂದರು.