ಚನ್ನಪಟ್ಟಣ (ರಾಮನಗರ): ಮಂಡ್ಯ ಅಭ್ಯರ್ಥಿಯಾಗಿ ಜೆಡಿಎಸ್ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು ಕಣಕ್ಕಿಳಿಯಲಿದ್ದಾರೆ ಎಂಬ ಮುಖಂಡ ಸಿ.ಎಸ್. ಪುಟ್ಟರಾಜು ಹೇಳಿಕೆ ಬೆನ್ನಲ್ಲೇ, ಎಚ್ಡಿಕೆ ಚನ್ನಪಟ್ಟಣ ಬಿಟ್ಟು ಹೋಗುವುದಕ್ಕೆ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದಾರೆ.
ಪಕ್ಷದ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ತಾಲ್ಲೂಕಿನ ರೆಸಾರ್ಟ್ವೊಂದರಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ, ನಿಖಿಲ್ ಅವರನ್ನು ಮುತ್ತಿಕೊಂಡ ಕಾರ್ಯಕರ್ತರು, ‘ಮಂಡ್ಯದಿಂದ ನೀವೇ ಸ್ಪರ್ಧೆ ಮಾಡಿ. ನಾವು ಸಹ ಅಲ್ಲಿಗೆ ಬಂದು ಪ್ರಚಾರ ಮಾಡುತ್ತೇವೆ. ಕುಮಾರಣ್ಣ ಚನ್ನಪಟ್ಟಣದ್ಲಲ್ಲೇ ಇರಲಿ’ ಎಂದು ದುಂಬಾಲು ಬಿದ್ದರು.
ಕಾರ್ಯಕರ್ತರ ಮನವಿ ಆಲಿಸಿದ ನಿಖಿಲ್, ‘ಎಚ್ಡಿಕೆ ಅವರೇ ಮಂಡ್ಯ ಅಭ್ಯರ್ಥಿಯಾಗಲಿದ್ದಾರೆ ಎಂದಿರುವ ಪುಟ್ಟರಾಜು ಅವರು, ಅಲ್ಲಿನ ಜನರ ಮನಸ್ಸಿನ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ಸ್ಪರ್ಧೆ ಕುರಿತು ತಂದೆ, ತಾತ ಎಚ್.ಡಿ. ದೇವೇಗೌಡರು ಹಾಗೂ ಪಕ್ಷದ ಹಿರಿಯರು ತೀರ್ಮಾನಿಸಿಲ್ಲ. ಹಾಗೇನಾದರೂ ಇದ್ದರೆ, ಚನ್ನಪಟ್ಟಣ ಮತ್ತು ರಾಮನಗರ ಕಾರ್ಯಕರ್ತರ ಅಭಿಪ್ರಾಯ ಪಡೆದು ನಿರ್ಧರಿಸಲಾಗುವುದು’ ಎಂದು ಸಮಾಧಾನಪಡಿಸಿದರು.
‘ಚನ್ನಪಟ್ಟಣದಲ್ಲಿ ಹಲವು ವರ್ಷಗಳಿಂದ ನಮ್ಮ ಕಾರ್ಯಕರ್ತರು ನೋವು ಅನುಭವಿಸಿದ್ದರು. ಹಾಗಾಗಿ, ಕುಮಾರಸ್ವಾಮಿ ಅವರು ಚನ್ನಪಟ್ಟಣಕ್ಕೆ ಬಂದು ಸ್ಪರ್ಧಿಸಿ ಧೈರ್ಯ ತುಂಬಿದರು. ಇಲ್ಲಿನ ಜನರು ಕೊಟ್ಟಿರುವ ಪ್ರೀತಿ ಹಾಗೂ ಪಕ್ಷದ ಮೇಲಿಟ್ಟಿರುವ ನಂಬಿಕೆಗೆ ನಾವು ಋಣಿಯಾಗಿರುತ್ತೇವೆ’ ಎಂದು ಹೇಳಿದರು.