ಚಿಕ್ಕಬಳ್ಳಾಪುರ: ಕೋಲಾರ ಮತ್ತು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಆಗ ನಾವು ಪ್ರಧಾನಿ ಅವರ ಬಳಿ ಹೋಗಿ ಕೃಷ್ಣಾ ನದಿ ನೀರು ಕೊಡಿ, ಕುಡಿಯುವ ನೀರಿನ ಸಮಸ್ಯೆ ಪರಿಹರಿಸಿ ಎಂದು ಕೇಳಬಹುದು ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ತಿಳಿಸಿದರು.
ನಗರದ ಹೊರವಲಯದ ಚೊಕ್ಕಹಳ್ಳಿ ಬಳಿ ನಡೆದ ವಿಜಯ ಸಂಕಲ್ಪ ಸಮಾವೇಶದಲ್ಲಿ ಅವರು ಮಾತನಾಡಿದರು.
ತಮ್ಮ ಆಡಳಿತದ 10 ವರ್ಷದಲ್ಲಿ ದೇಶವನ್ನು ಉತ್ತಮ ಸ್ಥಾನಕ್ಕೆ ಕೊಂಡೊಯ್ದಿರುವ ಪ್ರಧಾನಿ ನರೇಂದ್ರ ಮೋದಿ. ಅಂತಹವರ ಬಗ್ಗೆ ಈ ರಾಜ್ಯದ ಮುಖ್ಯಮಂತ್ರಿ ಚೊಂಬು ಕೊಟ್ಟರು ಎಂದು ಮಾತನಾಡುವರು. ಕಾಂಗ್ರೆಸ್ನವರು ಈ ದೇಶದ ಸಂಪತ್ತನ್ನು ಲೂಟಿ ಮಾಡಿದರು ಎಂದರು.
ಪರಿಶಿಷ್ಟ ಜಾತಿ, ಪಂಗಡದ ಜನರನ್ನು ಮೇಲೆತ್ತಿದ್ದು ನರೇಂದ್ರ ಮೋದಿ. ಆದರೆ ಈಗ ಅವರ ಹೆಸರು ಹೇಳಿ ಕ್ಷುಲ್ಲಕ ರಾಜಕಾರಣವನ್ನು ಮಾಡುತ್ತಿದ್ದಾರೆ. ದೇಶಕ್ಕೆ ಸುಮಾರು 34 ಕಾರ್ಯಕ್ರಮಗಳನ್ನು ನೀಡಿದ್ದಾರೆ. ನಿರುದ್ಯೋಗ ಪರಿಹಾರಕ್ಕೆ ಕ್ರಮವಹಿಸಿದ್ದಾರೆ ಎಂದರು.
ಈಗ ರಾಜ್ಯದಲ್ಲಿ ಐದು ಗ್ಯಾರಂಟಿ ಮತ್ತು ದೇಶದಲ್ಲಿ 25 ಗ್ಯಾರಂಟಿ ಎಂದು ಕಾಂಗ್ರೆಸ್ನವರು ಹೇಳುತ್ತಿದ್ದಾರೆ. ಆದರೆ 10 ವರ್ಷಗಳಿಂದ ವಿರೋಧ ಪಕ್ಷದ ನಾಯಕನ ಸ್ಥಾನ ಪಡೆಯುವ ಯೋಗ್ಯತೆಯೂ ಕಾಂಗ್ರೆಸ್ಗೆ ಇಲ್ಲವಾಗಿದೆ ಎಂದು ಟೀಕಿಸಿದರು.