ಕಲಬುರ್ಗಿ: ‘ಪ್ರಧಾನಿ ನರೇಂದ್ರ ಮೋದಿಯನ್ನು ತೋರಿಸಿ ಮತ ಕೇಳುವ ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ, ಅಪ್ಪನನ್ನು ತೋರಿಸಿ ಮಗನಿಗೆ ಹೆಣ್ಣು ಕೇಳಿದಂತಾಗಿದೆ’ ಎಂದು ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಲೇವಡಿ ಮಾಡಿದರು.
ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಮೋದಿ ಕಲಬುರ್ಗಿಯಿಂದ ಸ್ಪರ್ಧೆ ಮಾಡಿದ್ದಾರಾ?, ಕಲಬುರ್ಗಿ ಮೀಸಲು ಕ್ಷೇತ್ರ. ಮೋದಿ ಇಲ್ಲಿ ಸ್ಪರ್ಧಿಸಲು ಬರುವುದಿಲ್ಲ. ಆದರೆ, ಗುಲಾಂನಬಿ ಆಜಾದ್ ಅವರೇನಾದರೂ ನನಗೆ ಟಿಕೆಟ್ ಕೊಟ್ಟರೆ ನಾನು ವಾರಾಣಸಿಯಿಂದ ಸ್ಪರ್ಧಿಸಬಹುದು’ ಎಂದು ಕುಟುಕಿದರು.
ಭಯೋತ್ಪಾದನೆಗೆ ಧರ್ಮವಿಲ್ಲ; ಆಜಾದ್: ‘ಭಯೋತ್ಪಾದನೆಗೆ ಯಾವುದೇ ಧರ್ಮವಿಲ್ಲ. ಮಾನವೀಯತೆ ಮೇಲೆ ನಡೆಯುವ ಹಲ್ಲೆ, ಮಾರಣಹೋಮವನ್ನು ಪ್ರತಿಯೊಬ್ಬರೂ ಖಂಡಿಸಲೇಬೇಕು’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುಲಾಂ ನಬಿ ಆಜಾದ್ ಹೇಳಿದರು.
ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ನೂರಾರುಜನ ಸಾವಿಗೀಡಾಗಿರುವುದನ್ನು ಪ್ರಸ್ತಾಪಿಸಿ, ‘ಇದು ಅಮಾಯಕರ ಮೇಲಿನ ಹಲ್ಲೆಯಾಗಿದೆ. ಭಯೋತ್ಪಾದಕರು ಯಾರೇ ಇರಲಿ, ಅವರಿಗೆ ಶಿಕ್ಷೆಯಾಗಲೇಬೇಕು’ ಎಂದು ಭಾನುವಾರ ಇಲ್ಲಿ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಪ್ರತಿಪಾದಿಸಿದರು.
‘ಖರ್ಗೆಯಿಂದ ಮತಯಂತ್ರ ದುರ್ಬಳಕೆ ಸಾಧ್ಯತೆ’ ಹುಬ್ಬಳ್ಳಿ: ‘ಸೋಲಿನ ಭೀತಿಯಲ್ಲಿರುವ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಮತಯಂತ್ರ ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆಯಿದೆ. ಈ ಕುರಿತು ಕ್ರಮ ಕೈಗೊಳ್ಳುವಂತೆ ಚುನಾವಣಾಧಿಕಾರಿಗೆ ಮತ್ತೊಮ್ಮೆ ದೂರು ನೀಡಲಾಗುವುದು’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಹೇಳಿದರು.