ದೇವನಹಳ್ಳಿ: ‘ಪಕ್ಷಕ್ಕೆ ಬಲ ತುಂಬುವವರನ್ನು ಸ್ವಾಗತಿಸುತ್ತೇವೆಯೇ ಹೊರತು ಬೇಡ ಎನ್ನುವುದಿಲ್ಲ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ರಾಜಣ್ಣ ತಿಳಿಸಿದರು.
ಉಗನವಾಡಿ ಗ್ರಾಮದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕಾಂಗ್ರೆಸ್ ಮುಖಂಡರಾದ ಅವತಿ ನಾರಾಯಣಸ್ವಾಮಿ, ಸಾದಹಳ್ಳಿ ಎಸ್.ಜಿ.ನಾರಾಯಣಸ್ವಾಮಿ ತಮ್ಮದೇ ಆದಂತಹ ಮತ ಬ್ಯಾಂಕ್ ಹೊಂದಿರುವ ಪ್ರಬಲ ಮುಖಂಡರು. ಸ್ವಯಂಪ್ರೇರಿತರಾಗಿ ಬಿಜೆಪಿಗೆ ಸೇರ್ಪಡೆಗೊಂಡು ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಒಂದೊಂದು ಮತಗಳು ಕೂಡ ಗೆಲುವಿನಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ನಾವು ಯಾರನ್ನು ಪಕ್ಷಕ್ಕೆ ಬನ್ನಿ ಎಂದು ಒತ್ತಾಯಿಸುತ್ತಿಲ್ಲ’ ಎಂದು ಹೇಳಿದರು.
‘ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸು, ಐದು ವರ್ಷದ ಜನ ಪರ ಆಡಳಿತವನ್ನು ಮೆಚ್ಚಿ ಇತರೆ ಪಕ್ಷಗಳಿಂದ ಮುಖಂಡರು ಸೇರ್ಪಡೆಯಾಗುತ್ತಿದ್ದಾರೆ. ಇನ್ನು ಅನೇಕ ಮುಖಂಡರು ಬರುವವರಿದ್ದಾರೆ. ಈ ಬಾರಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ ನಿರೀಕ್ಷೆಗೂ ಮೀರಿ ಅತಿ ಹೆಚ್ಚು ಮತಗಳ ಅಂತರದಿಂದ ಗೆಲವು ಸಾಧಿಸಲಿದ್ದಾರೆ’ ಎಂದು ಹೇಳಿದರು.
ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರಾದ ಪಿಳ್ಳಣ್ಣ, ತ್ಯಾಗರಾಜು, ವೆಂಕಟರಮಣಪ್ಪ, ವೆಂಕಟೇಶ್, ನಾಗರಾಜ್, ನಾರಾಯಣಸ್ವಾಮಿ, ನಿರಂಜನ್, ರಮೇಶ್, ಪೊಸ್ಟ್ ರಮೇಶ್, ಮುನಿರಾಜು, ಮಂಜುನಾಥ್, ಶ್ರೀನಿವಾಸ್ ಪಕ್ಷಕ್ಕೆ ಸೇರಿದರು.
ಬಿಜೆಪಿ ತಾಲ್ಲೂಕು ಘಟಕ ಪ್ರಧಾನ ಕಾರ್ಯದರ್ಶಿ ಸೊಣ್ಣೇಗೌಡ, ಮುಖಂಡರಾದ ಇಂಡ್ರಸಹಳ್ಳಿ ಗೋಪಿ, ಎಸ್.ಜಿ.ನಾರಾಯಣಸ್ವಾಮಿ ಇದ್ದರು.