ಹಾಸನ : ಏ. 18ರಂದು ನಡೆಯಲಿರುವ ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಅವಧಿ ಮಂಗಳವಾರ ಮುಕ್ತಾಯವಾಗಿದೆ.
ಲೋಕಸಭೆ ಪ್ರವೇಶ ಬಯಸಿ ವಿವಿಧ ಪಕ್ಷಗಳ ಅಭ್ಯರ್ಥಿಗಳು ಸಲ್ಲಿಸಿರುವ ನಾಮಪತ್ರಗಳ ಪರಿಶೀಲನೆ ಬುಧವಾರ ನಡೆಯಲಿದೆ. ಚುನಾವಣಾ ಕಣದಿಂದ ಹಿಂದೆ ಸರಿಯಬೇಕೆಂಬ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಮಾ.29ರೊಳಗೆ ವಾಪಸ್ ಪಡೆಯಬಹುದು.
ಹಾಸನ ಲೋಕಸಭಾ ಕ್ಷೇತ್ರದ ಬಿಎಸ್ಪಿ ಅಭ್ಯರ್ಥಿಯಾಗಿ ಅರಕಲಗೂಡು ತಾಲ್ಲೂಕಿನ ಕೊಣನೂರಿನ ಕೆ.ಎಚ್. ವಿನೋದ್ ರಾಜ್ ಉಮೇದುವಾರಿಕೆ ಸಲ್ಲಿಸಿದರು.
ಇದಕ್ಕೂ ಮೊದಲು ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ತಮ್ಮ ತಾಯಿ ಕಾಮಾಕ್ಷಿ, ತಂದೆ ಹನುಮಂತ್ಯಯ್ಯ, ಅಪಾರ ಕಾರ್ಯಕರ್ತರು ಹಾಗೂ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಬಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಅವರಿಗೆ ನಾಮಪತ್ರ ಸಲ್ಲಿಸಿದರು.
ಈ ವೇಳೆ ರಾಜ್ಯ ಘಟಕದ ಅಧ್ಯಕ್ಷ ಹರಿರಾಮ್, ರಾಜ್ಯ ಕಾರ್ಯದರ್ಶಿ ಗಂಗಾಧರ್ ಬಹುಜನ್, ಜಿಲ್ಲಾಧ್ಯಕ್ಷ ಹರೀಶ್, ರಾಜ್ಯ ಕಾರ್ಯದರ್ಶಿ ಕೆ.ಸಿ.ನಾಗರಾಜ್ ಸಾಥ್ ನೀಡಿದರು.
ಕಡೆ ದಿನ ಆರು ಮಂದಿ ಉಮೇದುವಾರಿಕೆ ಸಲ್ಲಿಸಿದರು. ಪಕ್ಷೇತರರಾಗಿ ರಾಮನಾಥಪುರ ಹೋಬಳಿಯ ವಡ್ಡರಳ್ಳಿಯ ಕೆಂಪಯ್ಯ, ಸಾಲಗಾಮೆ ಹೋಬಳಿಯ ರಾಮದೇವರಪುರದ ಆರ್.ಜಿ.ಸತೀಶ್, ಅರಕಲಗೂಡು ತಾಲ್ಲೂಕಿನ ಹೊನ್ನಾವರ ಗ್ರಾಮದ ಬಿ.ಪಿ ಕಾಳಪ್ಪ, ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಎಂ. ಮಹೇಶ್ ನಾಮಪತ್ರ ಸಲ್ಲಿಸಿದರು.
ಅಲ್ಲದೇ, ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಎ.ಮಂಜು ಅವರ ಪರವಾಗಿ ಸೂಚಕರಾದ ಸಲೀಂ ಅಹಮ್ಮದ್ ಅವರು ನಾಮಪತ್ರ ಸಲ್ಲಿಸಿದ್ದಾರೆ. ಒಟ್ಟು ಹತ್ತು ಅಭ್ಯರ್ಥಿಗಳು 18 ನಾಮಪತ್ರ ಸಲ್ಲಿಸಿದ್ದಾರೆ.