ಭಾರತ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ, ಇಲ್ಲಿ ಸಾರ್ವಜನಿಕರು ಮತ ಚಲಾವಣೆಯ ಮೂಲಕ ತಮ್ಮ ಪ್ರತಿನಿಧಿಯನ್ನು ಆರಿಸುವ ವ್ಯವಸ್ಥೆ ಇದೆ. ಮತ ಚಲಾವಣೆ ಎನ್ನುವುದು ದೊಡ್ಡ ಅಸ್ತ್ರ. ಮತ ಚಲಾವಣೆ ಜವಾಬ್ದಾರಿಯಷ್ಟೇ ಅಲ್ಲ ಪ್ರತಿಯೊಬ್ಬ ನಾಗರಿಕರ ಕರ್ತವ್ಯ ಕೂಡ ಆಗಿದೆ.
ಉದ್ದೇಶಪೂರ್ವಕವಾಗಿ ಮತದಾನದಿಂದ ದೂರ ಉಳಿಯುವವರು ನಿಜವಾಗಿಯೂ ಈ ದೇಶದ ಪ್ರಜೆಗಳಾಗಲು ಅರ್ಹರಲ್ಲ. ಈ ದೇಶದ ಯಾವ ಸೌಲಭ್ಯಗಳನ್ನು ಪಡೆಯುವ ನೈತಿಕತೆಯೂ ಅಂತಹವರಿಗೆ ಇರುವುದಿಲ್ಲ. ಪ್ರತಿಯೊಬ್ಬರು ತಪ್ಪದೇ ಮತದಾನ ಮಾಡಬೇಕು.
ಚುನಾವಣಾ ಸಮಯದಲ್ಲಿ ಇನ್ಯಾರದೋ ಮುಖ ತೋರಿಸಿ ತಮಗೆ ಮತ ಕೇಳುವವರು ಇರುತ್ತಾರೆ. ಅಂತಹವರ ಬಗ್ಗೆ ಎಚ್ಚರಿಕೆ ಇರಬೇಕು. ಸ್ಥಳೀಯ ಸಮಸ್ಯೆಗಳಿಗೆ ದನಿ ಆಗುವವರನ್ನು ಮತ್ತು ಆಯಾ ಕ್ಷೇತ್ರದ ಪ್ರತಿನಿಧಿ ಆಗುವ ಯೋಗ್ಯತೆ ಇರುವವರಿಗೆ ಮತ ಚಲಾಯಿಸಿ ಅವರನ್ನು ಆರಿಸಬೇಕು. ಕೈಗೆಟುಕದ ದೊಡ್ಡವರಿಗಾಗಿ ಇನ್ಯಾರೋ ದಡ್ಡನನ್ನು ಆಯ್ಕೆ ಮಾಡಬಾರದು.