ಹಿಂದಿ ರಾಷ್ಟ್ರ ಭಾಷೆ, ಅದನ್ನು ಎಲ್ಲರೂ ಗೌರವಿಸಬೇಕು ಎಂದುಬಾಲಿವುಡ್ ನಟ ಅರ್ಜುನ್ ರಾಮ್ಪಾಲ್ ಹೇಳಿದ್ದಾರೆ. ಈ ಹೇಳಿಕೆ ವಿವಾದದ ಸ್ವರೂಪ ಪಡೆದುಕೊಂಡಿದೆ.
ಇಂಡಿಯಾ ಟುಡೆ ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಅವರು ‘ಹಿಂದಿ ರಾಷ್ಟ್ರ ಭಾಷೆ, ಅದನ್ನು ಎಲ್ಲರೂ ಗೌರವಿಸಬೇಕು‘ ಎಂದು ಹೇಳಿದ್ದಾರೆ.
'ಭಾರತ ಹಲವು ಭಾಷೆ, ಸಂಸ್ಕೃತಿ, ವಿವಿಧ ಧರ್ಮಗಳಿಂದ ಕೂಡಿದ ದೇಶವಾಗಿದೆ. ಇಲ್ಲಿ ನಾವು ಶಾಂತಿಯುತ, ಸಹಬಾಳ್ವೆ ಜೀವನ ನಡೆಸುತ್ತಿದ್ದೇವೆ. ಇಂತಹ ವಾತಾವರಣದಲ್ಲಿ ರಾಷ್ಟ್ರ ಭಾಷೆ ಮುಖ್ಯವಾಗುವುದಿಲ್ಲ. ಭಾರತದಲ್ಲಿ ಹಿಂದಿಯನ್ನು ಹೆಚ್ಚಾಗಿ ಮಾತನಾಡುತ್ತಾರೆ ಹಾಗೂ ಅರ್ಥ ಮಾಡಿಕೊಳ್ಳುತ್ತಾರೆ. ಹೀಗಾಗಿ ಹಿಂದಿ ನಮ್ಮರಾಷ್ಟ್ರ ಭಾಷೆ, ಅದನ್ನು ನಾವು ಗೌರವಿಸಬೇಕು ಎಂದು ಹೇಳಿದ್ದಾರೆ.
ಭಾರತದಲ್ಲಿ ನೆಲೆಸಿರುವವರು ವಿಭಿನ್ನ ಸಂಸ್ಕೃತಿಗಳನ್ನು ಅಳವಡಿಸಿಕೊಳ್ಳುವುದು ಉತ್ತಮ. ಎಲ್ಲರೂ ತಮಿಳು, ತೆಲುಗು ಭಾಷೆಗಳನ್ನು ಕಲಿಯುವುದು ಉತ್ತಮ ಎಂದಿದ್ದಾರೆ. ನಾನು ಮುಂಬೈನಲ್ಲಿ ನೆಲೆಸಿದ್ದು ಮರಾಠಿಯನ್ನು ಕಲಿತ್ತಿದ್ದೇನೆ, ವಿದ್ಯಾಭ್ಯಾಸ ಸಮಯದಲ್ಲಿ ತಮಿಳುನಾಡಿನಲ್ಲಿ ಇದ್ದೆ, ಹಾಗಾಗಿ ತಮಿಳನ್ನು ಕಲಿತೆ, ಪಂಜಾಬ್ನಲ್ಲಿ ಸಿನಿಮಾಗಳ ಶೂಟಿಂಗ್ ಮಾಡುವಾಗ ಪಂಜಾಬಿಯನ್ನು ಕಲಿತೆ. ಹೀಗೆ ನಾವು ಎಲ್ಲ ಭಾಷೆಯನ್ನು ಕಲಿತುಮಾತನಾಡುವುದರಿಂದ ಖುಷಿ ಸಿಗುತ್ತದೆ ಎಂದು ಹೇಳಿದ್ದಾರೆ.
ಕೆಲವು ದಿನಗಳ ಹಿಂದೆ, ಹಿಂದಿ ರಾಷ್ಟ್ರ ಭಾಷೆ ಹೌದೇ ಅಲ್ಲವೇ ಎಂಬ ಬಗ್ಗೆ ಕನ್ನಡದ ನಟ ಸುದೀಪ್ ಮತ್ತು ಹಿಂದಿ ನಟ ಅಜಯ್ ದೇವಗನ್ ಮಧ್ಯೆ ನಡೆದ ಟ್ವೀಟ್ ಸಮರ ನಡೆದಿತ್ತು. ನಟ ಅಜಯ್ ದೇವಗನ್ ಹಿಂದಿ ರಾಷ್ಟ್ರ ಭಾಷೆ ಎಂದು ಹೇಳಿದ್ದರು. ಆದರೆಸುದೀಪ್ ಹಿಂದಿ ರಾಷ್ಟ್ರ ಭಾಷೆಯಲ್ಲ ಎಂದು ಹೇಳಿ ಟ್ವೀಟ್ ಮಾಡಿದ್ದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ‘ಕನ್ನಡವೇ ಸಾರ್ವಭೌಮ ಭಾಷೆ. ಎಲ್ಲರೂ ಇದನ್ನು ಮನಗಂಡು ಗೌರವಿಸಬೇಕು’ ಎನ್ನುವ ಮುಖೇನ ಸುದೀಪ್ ಅವರನ್ನು ಬೆಂಬಲಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.