ಬೆಂಗಳೂರು: ನಟ ನಿರ್ದೇಶಕ ರಿಷಭ್ ಶೆಟ್ಟಿ ಅವರ ಕಾಂತಾರ ಸಿನಿಮಾ ಅದ್ಭುತ ಯಶಸ್ಸು ಕಂಡು ಚಿತ್ರಮಂದಿರಗಳಲ್ಲಿ ಇನ್ನೂ ಪ್ರದರ್ಶನ ಕಾಣುತ್ತಿದೆ.
ರಜನಿಕಾಂತ್ ಸೇರಿದಂತೆ ಭಾರತೀಯ ಚಿತ್ರರಂಗದ ಅನೇಕ ದಿಗ್ಗಜರು ಕಾಂತಾರ ಚಿತ್ರವನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ. ಅದೇ ರೀತಿ ನಟ ಕಮಲ್ ಹಾಸನ್ ಅವರು ಕೂಡ ರಿಷಭ್ ಶೆಟ್ಟಿ ಅವರಿಗೆ ಪತ್ರ ಬರೆದು ಕಾಂತಾರ ಸಿನಿಮಾ ಬಗ್ಗೆ ಪ್ರಶಂಷೆ ನೀಡಿದ್ದಾರೆ.
ಈ ವಿಷಯವನ್ನು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಹಂಚಿಕೊಂಡು ರಿಷಭ್ ಶೆಟ್ಟಿ ಸಂತಸ ವ್ಯಕ್ತಪಡಿಸಿದ್ದಾರೆ.
‘ನಾನು ಸಹಜವಾಗಿ ದೇವರನ್ನು ನಂಬುವುದಿಲ್ಲ. ಆದರೆ, ಅದರ ಅವಶ್ಯಕತೆಯನ್ನು ಅರ್ಥಮಾಡಿಕೊಂಡಿದ್ದೇನೆ. ನಿಮ್ಮ ಕಾಂತಾರ ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ದೇವರು ತಾಯಿಯಂತೆ ವರ್ತಿಸುವುದನ್ನು ಕಂಡೆ. ಇದು ದ್ರಾವಿಡ ಸಂಸ್ಕೃತಿಯ ಪ್ರತೀಕ, ಅದ್ಭುತ’ ಎಂದು ಬಣ್ಣಿಸಿದ್ದಾರೆ.
‘ಒಂದು ಸುಂದರ ಕಲಾಕೃತಿಯು ಶ್ರೇಷ್ಠತೆಯ ಸ್ಥಾನಮಾನವನ್ನು ಹೇಗೆ ಹೊಂದುತ್ತದೆ ಎಂಬುದು ಕಾಂತಾರ ಸಿನಿಮಾದಿಂದ ಸಾಬೀತಾಗಿದೆ. ಸಿನಿಮಾದಲ್ಲಿ ಕ್ಲಾಸಿಕ್ ಛಾಯೆ ದಟ್ಟವಾಗಿದೆ. ದಕ್ಷಿಣ ಭಾರತ ಚಿತ್ರರಂಗದ ಶ್ರೇಷ್ಠತೆಯನ್ನು ನೀವು ಮುಂದೆ ಕೊಂಡೊಯ್ಯುತ್ತಿರಿ’ ಎಂದು ಕಮಲ್ ಹೇಳಿದ್ದಾರೆ.
‘ಅರ್ಹ ವ್ಯಕ್ತಿಗಳಿಗೆ ಅದೃಷ್ಠ ಎಂಬುದೇ ಇಲ್ಲ. ನಿಮ್ಮ ಮುಂದಿನ ಸಿನಿಮಾ ನಿಮ್ಮದೇ ಕಾಂತಾರ ಸಿನಿಮಾದ ದಾಖಲೆಯನ್ನು ಮುರಿಯುವಂತಾಗಲಿ’ ಎಂದು ಶುಭಕೋರಿದ್ದಾರೆ.