ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡಿಷನ್ ತಂಗಿ ಪಾತ್ರಕ್ಕೆ, ಆಗಿದ್ದು...

Last Updated 1 ಏಪ್ರಿಲ್ 2019, 19:31 IST
ಅಕ್ಷರ ಗಾತ್ರ

ಕನ್ನಡ ಚಲನಚಿತ್ರ ‘ದಾಮಾಯಣ’,ತನ್ನ ಹೆಸರಿನಿಂದಲೇ ಈಗಾಗಲೇ ಬಹಳಷ್ಟು ಸುದ್ದಿ ಮಾಡುತ್ತಿದೆ. ಹೆಸರಿನಷ್ಟೇ ವಿಶೇಷವಾದ ಕಥೆಯಿರುವ ಚಲನಚಿತ್ರದ ಮೇಲೆ ಸಿನಿಪ್ರಿಯರು ತುಂಬು ನಿರೀಕ್ಷೆ ಹೊಂದಿದ್ದಾರೆ. ದಾಮಾಯಣದ ನಾಯಕಿಯ ಪಾತ್ರದ ಆಯ್ಕೆಯ ಹಿಂದೆಯೂ ಇದೆ ಒಂದು ಇಂಟರೆಸ್ಟಿಂಗ್ ಕಥೆ.

ಚಲನಚಿತ್ರದಲ್ಲಿನ ಕಥೆಯ ನಿರೂಪಣೆಯಲ್ಲಿ ಪಾತ್ರಧಾರಿಗಳು ಮುಖ್ಯವಾಗುತ್ತಾರೆ. ದಾಮಾಯಣದಲ್ಲಿ ಹೊಸತನತರಬೇಕು ಎನ್ನುವ ದೃಷ್ಟಿಯಿಂದ ತಂಡ ಬಹುತೇಕ ಎಲ್ಲಾ ಪಾತ್ರಗಳಿಗೂ ಹೊಸ ಮುಖಗಳನ್ನೇ ಹುಡುಕುತ್ತಿತ್ತು. ಆನ್‍ಲೈನ್‍ಮೂಲಕ ಪಾತ್ರಗಳ ಆಡಿಷನ್ ನಡೆಸಿತ್ತು. ಚಿತ್ರತಂಡದ ಮುಂದಿದ್ದ ಮುನ್ನೂರಕ್ಕೂ ಹೆಚ್ಚು ಆಡಿಷನ್‌ ವಿಡಿಯೊಗಳಲ್ಲಿ ದಾಮಾಯಣದ ನಾಯಕಿ ಅನಘ ಅವರ ಆಡಿಷನ್ ವಿಡಿಯೊ ಕೂಡ ಒಂದು. ಆದರೆ, ಅನಘ ನೀಡಿದ್ದ ಆಡಿಷನ್ ತಂಗಿಯ ಪಾತ್ರಕ್ಕೆ!

ಅನಘ, ಎಸ್.ಡಿ.ಎಂ. ಕಾಲೇಜಿನಲ್ಲಿ ಮ್ಯೆಕಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದ ಹುಡುಗಿ. ವೃತ್ತಿ ಮುಂದುವರಿಸಿದ್ದು ಮಾತ್ರ ಬೆಂಗಳೂರಿನಲ್ಲಿ ವೆಡ್ಡಿಂಗ್ ಪ್ಲಾನರ್ ಆಗಿ. ಜೀವನದಲ್ಲಿ ಹೊಸ ಅನುಭವಗಳು ಮುಖ್ಯ ಎಂದು ನಂಬುವ ಅನಘ ಫೇಸ್‍ಬುಕ್‍ನಲ್ಲಿ ಆಡಿಷನ್ ಕುರಿತ ಮಾಹಿತಿಯ ಬಗ್ಗೆ ಆಸಕ್ತಿ ತೋರಿ- ದಾಮಾಯಣ ಚಿತ್ರತಂಡವನ್ನು ಸಂಪರ್ಕಿಸಿದ್ದಾರೆ. ತಂಗಿಯ ಪಾತ್ರದ ಸಂಭಾಷಣೆ ಪಡೆದು ಆಡಿಷನ್ ನೀಡಿದ್ದಾರೆ.

ದಾಮಾಯಣದ ನಿರ್ದೇಶಕ ಶ್ರೀಮುಖ, ಸಹ ನಿರ್ದೇಶಕ ಅಕ್ಷಯ್‍ ರೇವಣ್ಕರ್ ಆಡಿಷನ್ ನಡೆಸುತ್ತಿದ್ದರು. ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಪ್ರಣೀತ್‍ ಎಂ. ಬಿ. ಹೊತ್ತಿದ್ದರು. ಅನಘ ಅವರ ಅಭಿನಯವು ತಂಡದ ಗಮನ ಸೆಳೆದಿತ್ತು. ತಂಗಿಯ ಪಾತ್ರದ ಮುಂದೆ ಅನಘ ಹೆಸರು ಬರೆದದ್ದೂ ಆಗಿತ್ತು.

ನಾಯಕಿಯ ಆಡಿಷನ್ ನಡೆಯುವ ಸಂದರ್ಭದಲ್ಲಿ ಅನಘ ಹೆಸರು ಮತ್ತೆ ಪ್ರಸ್ತಾಪಕ್ಕೆ ಬಂತು. ಅವರಿಗೆ ನಾಯಕಿ ಪಾತ್ರದ ಸಂಭಾಷಣೆ ಕೊಟ್ಟು ನೋಡೋಣ ಎಂದು ಮೇಲ್ವಿಚಾರಕ ಪ್ರಣೀತ್ ತಂಡಕ್ಕೆ ಸಲಹೆ ನೀಡಿದ್ದಾರೆ. ಕೊಟ್ಟ ಅವಕಾಶವನ್ನು ಸರಿಯಾಗಿಯೇ ಬಳಸಿದ ಅನಘ ತಮ್ಮ ಪ್ರತಿಭೆಯನ್ನು ನಿರೂಪಿಸಿಯೇ ಬಿಟ್ಟಿದ್ದರು.

ಪಾತ್ರದ ಕುರಿತ ಹೆಚ್ಚೇನೂ ವಿವರ ಬಿಟ್ಟುಕೊಡದ ಶ್ರೀಮುಖ, ‘ಪಾತ್ರಕ್ಕೆ ನಟನೆಯೇ ಮಾನದಂಡವಾಗಿತ್ತು. ಪಾತ್ರದ ಲಕ್ಷಣಗಳನ್ನೂ ಅನಘ ಹೋಲುತ್ತಿದ್ದರು. ಅವರ ಆಯ್ಕೆಯನ್ನು ತಮ್ಮ ಪಾತ್ರದ ಮೂಲಕ ಪ್ರಾಮಾಣಿಕವಾಗಿ ನಿರೂಪಿಸಿದ್ದಾರೆ’ ಎಂದರು.

ಸದ್ಯಕ್ಕೆ ಚಿತ್ರತಂಡ ಕೊನೆಯ ಹಂತದ ನಿರ್ಮಾಣಕಾರ್ಯ ನಡೆಸುತ್ತಿದ್ದು, ಜೊತೆಗೆ ಪೋಸ್ಟರ್ ಬಿಡುಗಡೆಯ ತಯಾರಿಯನ್ನೂ ಮಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT