ರಾಜ್ಯದ ಚಿತ್ರಮಂದಿರಗಳ ತೆರೆಗಳಲ್ಲಿ ಇಂದು(ಏ.5) ಐದು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಶರಣ್ ಅಭಿನಯದ ‘ಅವತಾರ ಪುರುಷ–2’, ಸತೀಶ್ ನೀನಾಸಂ ನಟನೆಯ ‘ಮ್ಯಾಟ್ನಿ’, ದಿಗಂತ್ ಅವರ ‘ಮಾರಿಗೋಲ್ಡ್’, ಕಿರುತೆರೆಯಿಂದ ಬೆಳ್ಳಿತೆರೆಗೆ ಹೆಜ್ಜೆ ಇಟ್ಟಿರುವ ಕಿರಣ್ ರಾಜ್ ನಟನೆಯ ‘ಭರ್ಜರಿ ಗಂಡು’, ಕಿರಣ್ ಸ್ವಾಮಿ ನಿರ್ದೇಶನದ ‘ದಿ ಡಾರ್ಕ್ ವೆಬ್’ ಸಿನಿಮಾಗಳು ಪ್ರೇಕ್ಷಕರೆದುರಿಗೆ ಬಂದಿವೆ.
ಭರ್ಜರಿ ಗಂಡು:
‘ಕನ್ನಡತಿ’ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟು, ‘ಬಡ್ಡೀಸ್’ ಚಿತ್ರದ ಮೂಲಕ ನಾಯಕನಾಗಿ ಬೆಳ್ಳಿತೆರೆ ಪ್ರವೇಶಿಸಿದ್ದ ನಟ ಕಿರಣ್ ರಾಜ್ ಅಭಿನಯದ ಚಿತ್ರವಿದು. ಈ ಚಿತ್ರದಲ್ಲಿ ಕಿರಣ್ ರಾಜ್ ಎರಡು ಲುಕ್ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮದನ್ ಗೌಡ ಹಾಗೂ ಅನಿಲ್ ಕುಮಾರ್ ನಿರ್ಮಿಸಿರುವ ಈ ಚಿತ್ರವನ್ನು ಪ್ರಸಿದ್ಧ್ ನಿರ್ದೇಶಿಸಿದ್ದಾರೆ. ಕಿರಣ್ ರಾಜ್ ಅವರಿಗೆ ನಾಯಕಿಯಾಗಿ ಯಶಾ ಶಿವಕುಮಾರ್ ನಟಿಸಿದ್ದು, ರಮೇಶ್ ಭಟ್, ರಾಕೇಶ್ ರಾಜ್, ಸುರೇಖ, ವೀಣಾ ಸುಂದರ್, ಜಯಶ್ರೀ, ನಾಗೇಶ್ ರೋಹಿತ್, ಸೌರಭ್ ಕುಲಕರ್ಣಿ ಮುಂತಾದವರು ತಾರಾಬಳಗದಲ್ಲಿದ್ದಾರೆ. ಚಿತ್ರಕ್ಕೆ ಗುಮ್ಮಿನೇನಿ ವಿಜಯ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಕಿಟ್ಟಿ ಕೌಶಿಕ್ ಛಾಯಾಚಿತ್ರಗ್ರಹಣ ಹಾಗೂ ವೆಂಕಿ ಯುಡಿವಿ ಸಂಕಲನ ಚಿತ್ರಕ್ಕಿದೆ.
ಮಾರಿಗೋಲ್ಡ್:
ಗೋಲ್ಡ್ ಬಿಸ್ಕತ್ ಮಾರಲು ಹೊರಟ ನಾಲ್ವರು ಹುಡುಗರ ಕಥೆ ಈ ಸಿನಿಮಾ. ಆ್ಯಕ್ಷನ್ ಥ್ರಿಲ್ಲರ್ ಜಾನರ್ನ ಈ ಸಿನಿಮಾವನ್ನು ಆರ್.ವಿ. ಕ್ರಿಯೇಶನ್ಸ್ ಬ್ಯಾನರ್ ಅಡಿ ರಘುವರ್ಧನ್ ನಿರ್ಮಿಸಿ, ರಾಘವೇಂದ್ರ ಎಂ. ನಾಯ್ಕ ನಿರ್ದೇಶಿಸಿದ್ದಾರೆ. ದಿಗಂತ್ ನಾಯಕನಾಗಿ ಸಂಗೀತ ಶೃಂಗೇರಿ ನಾಯಕಿಯಾಗಿ ಬಣ್ಣಹಚ್ಚಿದ್ದಾರೆ. ಕೆ.ಎಸ್. ಚಂದ್ರಶೇಖರ್ ಛಾಯಾಚಿತ್ರಗ್ರಹಣ, ವೀರ್ ಸಮರ್ಥ್ ಸಂಗೀತ, ಯೋಗರಾಜ್ ಭಟ್, ವಿಜಯ್ ಭರಮಸಾಗರ, ಕವಿರಾಜ್ ಗೀತ ಸಾಹಿತ್ಯ, ರಘು ನಿಡವಳ್ಳಿ ಸಂಭಾಷಣೆ ಚಿತ್ರಕ್ಕಿದೆ. ಸಂಪತ್ ಮೈತ್ರೇಯ, ಯಶ್ ಶೆಟ್ಟಿ, ಕಾಕ್ರೋಚ್ ಸುಧಿ, ವಜ್ರಾಂಗ್ ಶೆಟ್ಟಿ ಮತ್ತಿತರರು ತಾರಾಬಳಗದಲ್ಲಿ ಇದ್ದಾರೆ.
ಮ್ಯಾಟ್ನಿ:
‘ಅಯೋಗ್ಯ’ ಸಿನಿಮಾ ಬಳಿಕ ನೀನಾಸಂ ಸತೀಶ್, ರಚಿತಾ ರಾಮ್ ಜೊತೆಯಾಗಿ ನಟಿಸಿರುವ ಸಿನಿಮಾವಿದು. ಎಫ್3 ಪ್ರೊಡಕ್ಷನ್ಸ್ ಲಾಂಛನದಲ್ಲಿ ಪಾರ್ವತಿ ಎಸ್. ಗೌಡ ನಿರ್ಮಿಸಿರುವ ಹಾಗೂ ಮನೋಹರ್ ಕಾಂಪಲ್ಲಿ ನಿರ್ದೇಶನದ ಈ ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ, ಸುಧಾಕರ್ ಎಸ್. ರಾಜ್ ಛಾಯಾಚಿತ್ರಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನವಿದೆ. ಅದಿತಿ ಪ್ರಭುದೇವ, ನಾಗಭೂಷಣ, ಶಿವರಾಜ್ ಕೆ.ಆರ್ ಪೇಟೆ ಮುಂತಾದವರು ತಾರಾಬಳಗದಲ್ಲಿದ್ದಾರೆ.
ದಿ ಡಾರ್ಕ್ ವೆಬ್:
ಪತ್ರಕರ್ತ ಮಂಜು ಬನವಾಸೆ ಹಾಗೂ ಹೆತ್ತೂರು ನಾಗರಾಜ್ ಎಂಎನ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿರುವ ಈ ಸಿನಿಮಾ ಸೈಬರ್ ಕ್ರೈಂ ಆಧಾರಿತ ಕಥಾಹಂದರ ಹೊಂದಿದೆ. ಈ ಸಿನಿಮಾದಲ್ಲಿ ನಾಯಕನಾಗಿ ಚೇತನ್ ನಟಿಸಿದ್ದಾರೆ. ನಾಯಕಿಯಾಗಿ ಮೇಘನಾ ಬಣ್ಣಚ್ಚಿದ್ದು, ಚಿತ್ರದಲ್ಲಿ ಬಹುತೇಕ ಪತ್ರಕರ್ತರೇ ಅಭಿನಯ ಮಾಡಿರುವುದು ವಿಶೇಷ. ಮಂಜು ಬನವಾಸೆ ಅವರು ನಿರ್ಮಾಣದ ಜೊತೆಗೆ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಕಿರಣ್ ಸ್ವಾಮಿ ಆ್ಯಕ್ಷನ್ ಕಟ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.