ಈ ಬಾರಿಯ ಕೆಸಿಸಿಯಲ್ಲಿ ಆರು ತಂಡಗಳಿದ್ದು, ಅಂತರರಾಷ್ಟ್ರೀಯ ಕ್ರಿಕೆಟ್ ಆಟಗಾರರಾದ ಬ್ರಯನ್ ಲಾರಾ, ಸುರೇಶ್ ರೈನಾ, ಕ್ರಿಸ್ ಗೇಲ್, ಬದರೀನಾಥ್, ಹರ್ಷಲ್ ಗಿಬ್ಸ್, ತಿಲಕರತ್ನೆ ದಿಲ್ಶಾನ್ ಈ ತಂಡಗಳಲ್ಲಿ ಆಡುತ್ತಿರುವುದು ವಿಶೇಷ. ಈ ಆಟಗಾರರು ಗುರುವಾರ(ಫೆ.23) ತಂಡ ಸೇರಿಕೊಳ್ಳಲಿದ್ದು, ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ನಟರಾದ ಶಿವರಾಜ್ಕುಮಾರ್, ಸುದೀಪ್, ಗಣೇಶ್, ಧನಂಜಯ, ಧ್ರುವ ಸರ್ಜಾ ತಂಡಗಳು ಇಲ್ಲಿವೆ. ಕಾರ್ಯಕ್ರಮದ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ನಟ ಸುದೀಪ್, ‘ಈ ವರ್ಷದ ಕೆಸಿಸಿಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಎರಡನೇ ಆವೃತ್ತಿಯ ಎರಡೂ ದಿನಗಳ ಟಿಕೆಟ್ ಸಂಖ್ಯೆಗಿಂತ ದುಪ್ಪಟ್ಟು ಟಿಕೆಟ್ಗಳು ಈಗಾಗಲೇ ಮಾರಾಟವಾಗಿವೆ. ಆನ್ಲೈನ್ ಜೊತೆಗೆ ಚಿನ್ನಸ್ವಾಮಿ ಕ್ರೀಡಾಂಗಣದ ಗೇಟ್ ಸಂಖ್ಯೆ 18ರಲ್ಲಿ ಟಿಕೆಟ್ ಮಾರಾಟ ನಡೆಯುತ್ತಿದೆ. ಗುರುವಾರವೂ ಟಿಕೆಟ್ ಮಾರಾಟ ತೆರೆದಿರುವುದರಿಂದ ಈ ಬಾರಿ ಕ್ರೀಡಾಂಗಣ ಭರ್ತಿಯಾಗುವ ಎಲ್ಲ ಲಕ್ಷಣಗಳಿವೆ. ಮೊದಲ ದಿನ 3.30ಕ್ಕೆ ಮೊದಲ ಪಂದ್ಯಾವಳಿ ಆರಂಭವಾಗಲಿದೆ. ಜೀ ಪಿಕ್ಚರ್ಸ್ನಲ್ಲಿ ಪಂದ್ಯಾವಳಿಗಳ ನೇರ ಪ್ರಸಾರ ಇರಲಿದೆ. ಉದ್ಘಾಟನಾ ಸಮಾರಂಭದಲ್ಲಿ ಕನ್ನಡದ ಬಾವುಟಕ್ಕೆ ಸಂಬಂಧಿಸಿದ ವಿಶೇಷವಾದ ಕಾರ್ಯಕ್ರಮವೊಂದು ಇರಲಿದೆ’ ಎಂದರು.