ಬೆಂಗಳೂರು: ‘ನಂದಿ ಚಲನಚಿತ್ರ ಪ್ರಶಸ್ತಿ–2023’ರಲ್ಲಿ ‘ಕಾಂತಾರ’ ಚಿತ್ರದಲ್ಲಿನ ನಟನೆಗಾಗಿ ನಟ ರಿಷಬ್ ಶೆಟ್ಟಿ ಅವರು ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ. ಇದೇ ಚಿತ್ರದ ನಿರ್ದೇಶನಕ್ಕಾಗಿ ಅವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯೂ ದೊರಕಿದೆ.
ಇತ್ತೀಚೆಗೆ ಬೆಂಗಳೂರಿನ ಒರಾಯನ್ ಮಾಲ್ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ನಟ ಶ್ರೀನಾಥ್ ಹಾಗೂ ನಟಿ ಭಾರತಿ ವಿಷ್ಣುವರ್ಧನ್ ಅವರು ಜೀವಮಾನ ಸಾಧನೆ ಪ್ರಶಸ್ತಿಗೆ ಭಾಜನರಾದರು. ‘ಕಾಂತಾರ’ ಸಿನಿಮಾದಲ್ಲಿನ ನಟನೆಗಾಗಿ ನಟಿ ಸಪ್ತಮಿ ಗೌಡ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿಕಟಪೂರ್ವ ಅಧ್ಯಕ್ಷ ಭಾ.ಮ.ಹರೀಶ್, ನಿರ್ಮಾಪಕ ನಿತ್ಯಾನಂದ ಪ್ರಭು, ಪದ್ಮಾವತಿ ಚಂದ್ರಶೇಖರ್ ಹಾಗೂ ಅನಿತಾ ರೆಡ್ಡಿ ಈ ಪ್ರಶಸ್ತಿಯ ಸಂಸ್ಥಾಪಕರಾಗಿದ್ದಾರೆ. ಭಾ.ಮ.ಗಿರೀಶ್, ಹರ್ಷಿತಾ, ನಂದಿತಾ ಹಾಗೂ ಅಶೋಕ್ ಅವರು ಪ್ರಶಸ್ತಿಯ ನಿರ್ದೇಶಕ ಸ್ಥಾನದಲ್ಲಿದ್ದಾರೆ. ಇದು ಪ್ರಶಸ್ತಿಯ ಮೊತ್ತಮೊದಲ ಆವೃತ್ತಿಯಾಗಿದೆ.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ನಟರಾದ ಶ್ರೀನಾಥ್, ರವಿಚಂದ್ರನ್, ರಿಷಬ್ ಶೆಟ್ಟಿ, ಧ್ರುವ ಸರ್ಜಾ, ವಿನೋದ್ ರಾಜ್, ವಸಿಷ್ಠ ಸಿಂಹ, ನಟಿಯರಾದ ಉಮಾಶ್ರೀ, ಪ್ರೇಮ, ಅನುಪ್ರಭಾಕರ್, ಹರಿಪ್ರಿಯಾ ಸೇರಿದಂತೆ ಹಲವು ಕಲಾವಿದರು ಭಾಗಿಯಾಗಿದ್ದರು.
ಪ್ರಶಸ್ತಿ ಪಡೆದವರ ಪಟ್ಟಿ
1. ಅತ್ಯುತ್ತಮ ಬಯೋಪಿಕ್: ವಿಜಯಾನಂದ
2. ಪ್ರಸಿದ್ಧ ನಟಿ ಪ್ರಶಸ್ತಿ: ಲೀಲಾವತಿ
3. ಜೀವಮಾನ ಸಾಧನೆ ಪ್ರಶಸ್ತಿ: ನಟ ಶ್ರೀನಾಥ್ ಹಾಗೂ ಭಾರತಿ ವಿಷ್ಣುವರ್ಧನ್.
4. ಅತ್ಯುತ್ತಮ ಸಾಕ್ಷ್ಯಚಿತ್ರ: ಗಂಧದಗುಡಿ
5. ಅತ್ಯುತ್ತಮ ನಟ(ಚೊಚ್ಚಲ ಸಿನಿಮಾ): ವಿಕ್ರಮ್ ರವಿಚಂದ್ರನ್