ರಾಷ್ಟ್ರಕೂಟ ಪಿಕ್ಚರ್ಸ್ ಲಾಂಛನದಲ್ಲಿ ವಿ.ರವಿಕುಮಾರ್ ಹಾಗೂ ಶಂಶುದ್ದೀನ್ ಎ. ನಿರ್ಮಿಸಿರುವ ‘ನಾಟ್ ಔಟ್’ ಚಿತ್ರದ ಮೋಷನ್ ಪೋಸ್ಟರ್ ಇತ್ತೀಚೆಗೆ ಬಿಡುಗಡೆಯಾಯಿತು.
‘ರಾಷ್ಟ್ರಕೂಟ ಪಿಕ್ಚರ್ಸ್ ಸಂಸ್ಥೆಯ ಮೊದಲ ಚಿತ್ರ ‘ಕಿಸ್’. ಈಗ ‘ನಾಟ್ ಔಟ್’ ನಿರ್ಮಾಣವಾಗಿದೆ. ಇನ್ನೂ ಎರಡು ಚಿತ್ರಗಳು ಸಿದ್ದವಾಗಿವೆ. ಆ ಕುರಿತು ಸದ್ಯದಲ್ಲೇ ಮಾಹಿತಿ ನೀಡುತ್ತೇವೆ. ವರ್ಷಕ್ಕೆ ನಾಲ್ಕು ಚಿತ್ರಗಳನ್ನು ನಿರ್ಮಾಣ ಮಾಡುವ ಯೋಜನೆ ನಮ್ಮ ಸಂಸ್ಥೆಗಿದೆ’ ಎಂದರು ನಿರ್ಮಾಪಕ ಶಂಶುದ್ದೀನ್.
‘ನಾಟ್ ಔಟ್’ ಎಂದರೆ ಕಣ್ಣಿಗೆ ಕಾಣದೆ ಇರುವ ವ್ಯಕ್ತಿ ಕೊಡುವ ತೀರ್ಪೆ ‘ನಾಟ್ ಔಟ್’. ಪ್ರತಿ ಆಟದಲ್ಲಿ ಒಬ್ಬ ಅಂಪೈರ್ ಇರುತ್ತಾನೆ.
ಜೀವನದ ಆಟಕ್ಕೂ ಒಬ್ಬ ಅಂಪೈರ್ ಇರುತ್ತಾನೆ. ಈ ಚಿತ್ರದಲ್ಲಿ ಹುಲಿ - ಕುರಿ ಎಂಬ ಹಳ್ಳಿ ಸೊಗಡಿನ ಆಟದ ರೀತಿಯೇ ಕಥೆ ಸಾಗುತ್ತದೆ. ಈ ಆಟದಲ್ಲಿ ಬೆಟ್ಟದ ತುದಿಯಲ್ಲಿರುವ ಹುಲಿಗಳು ಮತ್ತು ಬೆಟ್ಟದ ತಳದಲ್ಲಿರುವ ಕುರಿಗಳು ಬೆಟ್ಟವನ್ನು ಹತ್ತುವಾಗ ಹುಲಿಗಳಿಂದ ತಪ್ಪಿಸಿಕೊಳ್ಳುವುದಕ್ಕೆ ಮಾಡುವ ಪ್ರಯತ್ನಗಳು ಆಟದಲ್ಲಿ ಇದ್ದಂತೆ, ಚಿತ್ರಕಥೆ ಮತ್ತು ಸಂಭಾಷಣೆಯಲ್ಲಿ ಅದನ್ನುನೋಡಬಹುದು. ಸಿನಿಮಾದಲ್ಲಿ ಎಲ್ಲಾ ಪಾತ್ರಗಳು ಕಥೆಗೆ ಬಹು ಮುಖ್ಯವಾಗಿವೆ ಎಂದರು. ಆ ರೀತಿಯ ಕಥಾಹಂದರ ಹೊಂದಿರುವ ‘ನಾಟ್ ಔಟ್’ ನ ನಾಯಕನಾಗಿ ನಿರ್ಮಾಪಕ ರವಿಕುಮಾರ್ ಅವರ ಪುತ್ರ ಅಜಯ್ ಪೃಥ್ವಿ ಅಭಿನಯಿಸಿದ್ದಾರೆ. ರಚನಾ ಇಂದರ್ ನಾಯಕಿ. ರವಿಶಂಕರ್, ಕಾಕ್ರೋಜ್ ಸುಧಿ, ಗೋಪಾಲಕೃಷ್ಣ ದೇಶಪಾಂಡೆ, ಸಲ್ಮಾನ್, ಗೋವಿಂದೇಗೌಡ, ಪ್ರಶಾಂತ್ ಸಿದ್ದಿ ಮುಂತಾದವರು ತಾರಾಬಳಗದಲ್ಲಿದ್ದಾರೆ.
‘ಬೆಂಗಳೂರು - ಮೈಸೂರಿನಲ್ಲಿ ಚಿತ್ರೀಕರಣ ನಡೆದಿದೆ. ಜ್ಯೂಡಾ ಸ್ಯಾಂಡಿ ಸಂಗೀತ ನಿರ್ದೇಶನ, ಹಾಲೇಶ್ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ ಈ ಚಿತ್ರಕ್ಕಿದೆ. ‘ನಾಟ್ ಔಟ್’ ತೆರೆಗೆ ಬರಲು ಸಿದ್ಧವಾಗಿದೆ. ಟ್ರೇಲರ್ ಸದ್ಯದಲ್ಲೇ ಬಿಡುಗಡೆಯಾಗಲಿದೆ’ ಎಂದು ನಿರ್ದೇಶಕ ಅಂಬರೀಶ್ ತಿಳಿಸಿದರು.
‘ನಾನು ಏಕಾಏಕಿ ಚಿತ್ರರಂಗಕ್ಕೆ ಬಂದಿಲ್ಲ. ಐದನೇ ತರಗತಿಯಿಂದಲೇ ‘ಬಿಂಬ’ ಮೂಲಕ ಸಾಕಷ್ಟು ಕಲಿತೆ. ನಂತರ ಪ್ರಸಿದ್ಧ ತರಬೇತಿ ಶಾಲೆಯಲ್ಲಿ ನಟನೆ ಕೂಡ ಕಲಿತೆ. ‘ಮೆಹಬೂಬ’ ಚಿತ್ರದಲ್ಲಿ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಇನ್ನೂ ಮೂರು, ನಾಲ್ಕು ಚಿತ್ರಗಳಲ್ಲೂ ಅಭಿನಯಿಸಿದ್ದೇನೆ. ಈಗ ‘ನಾಟ್ ಔಟ್’ ಚಿತ್ರದಲ್ಲಿ ನಟಿಸಿದ್ದೇನೆ. ಚಿತ್ರ ಹಾಗೂ ನನ್ನ ಪಾತ್ರ ಚೆನ್ನಾಗಿದೆ. ಪ್ರೋತ್ಸಾಹ ನೀಡಿ’ ಎಂದರು ನಾಯಕ ಅಜಯ್ ಪೃಥ್ವಿ.
ತಾವು ನರ್ಸ್ ಪಾತ್ರದಲ್ಲಿ ನಟಿಸಿರುವುದಾಗಿ ರಚನಾ ಇಂದರ್ ಹೇಳಿದರು. ಕಾಕ್ರೋಜ್ ಸುಧಿ ತಮ್ಮ ಪಾತ್ರದ ವಿವರಣೆ ನೀಡಿದರು. ಕಾರ್ಯಕಾರಿ ನಿರ್ಮಾಪಕ ಕುಮಾರ್ ಸೇರಿದಂತೆ ಅನೇಕ ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.