ಹೈದರಾಬಾದ್: ನಟ ಪವನ್ ಕಲ್ಯಾಣ್ ಅವರ ಬಹುನಿರೀಕ್ಷಿತ ‘ಭೀಮ್ಲಾ ನಾಯಕ್'ಸಿನಿಮಾ ಮುಂದಿನ ವರ್ಷ ಜನವರಿ 12 ಕ್ಕೆ ತೆರೆಗೆ ಬರಲು ಸಜ್ಜಾಗುತ್ತಿದೆ.
ಇದೀಗ ಈ ಚಿತ್ರದ ಛಾಯಾಗ್ರಣದ ಹೊಣೆ ಹೊತ್ತು ಅಚ್ಚುಕಟ್ಟಾಗಿ ಮುಗಿಸಿರುವ ಖ್ಯಾತ ಸಿನಿಮಾಟೋಗ್ರಾಫರ್ ರವಿ ಕೆ ಚಂದ್ರನ್ ಅವರ ಕೆಲಸವನ್ನು ಪವನ್ ಕಲ್ಯಾಣ್ ಹಾಡಿ ಹೊಗಳಿದ್ದಾರೆ.
ಪವನ್ ಕಲ್ಯಾಣ್ ಅವರು ಕೈ ಬರಹದಲ್ಲಿ ಬರೆದು ಕಳಿಸಿರುವ ನೋಟ್ ಒಂದನ್ನು ಟ್ವಿಟರ್ನಲ್ಲಿ ಹಂಚಿಕೊಂಡಿರುವ ರವಿ ಕೆ ಚಂದ್ರನ್ ಅವರು, ‘ಭೀಮ್ಲಾ ನಾಯಕ್ ಸಿನಿಮಾದ ಎಡಿಟೆಡ್ ಫುಟೇಜ್ನ್ನು ವೀಕ್ಷಿಸಿದ ನಂತರ ಪವನ್ ಕಲ್ಯಾಣ್ ಅವರು ಅತೀವ ಸಂತಸಗೊಂಡಿದ್ದಾರೆ'ಎಂದು ಹೇಳಿದ್ದಾರೆ.
ಟಿಪ್ಪಣಿಯಲ್ಲಿ ಪವನ್ ಕಲ್ಯಾಣ್ ಅವರು, ‘ಪ್ರೀತಿಯ ರವಿ ಸರ್, ನಿಮ್ಮ ಸಂಪೂರ್ಣ ದೃಶ್ಯ ತೇಜಸ್ಸಿಗೆ ನನ್ನದೊಂದು ಸಲಾಂ, ನನ್ನನ್ನು ಭೀಮ್ಲಾ ನಾಯಕ್ ಸಿನಿಮಾದ ಭಾಗವಾಗಿ ಮಾಡಿದ್ದಕ್ಕೆ ನಿಮಗೆ ಧನ್ಯವಾದಗಳು. ಸಾಮಾನ್ಯ ಹಾಗೂ ಅಸಾಮಾನ್ಯವಾದ ವ್ಯತ್ಯಾಸವನ್ನು ನೀವು ಅದ್ಭುತವಾಗಿ ತೋರಿಸಿದ್ದೀರಿ'ಎಂದು ಕೊಂಡಾಡಿದ್ದಾರೆ.
ಇದಕ್ಕೆ ಧನ್ಯವಾದ ಸಲ್ಲಿಸಿ ಟ್ವೀಟ್ ಮಾಡಿರುವ ರವಿ ಕೆ ಚಂದ್ರನ್ ಅವರು, ‘ಪವನ್ ಕಲ್ಯಾಣ್ ಅವರ ಈ ನಲ್ಮೆಯ ಹೊಗಳಿಕೆಗೆ ನಾನು ವಿನೀತನಾಗಿದ್ದೇನೆ'ಎಂದು ಹೇಳಿದ್ದಾರೆ. ರವಿ ಅವರು, ತೆಲುಗು, ತಮಿಳು, ಮಲೆಯಾಳಂ ಸೇರಿದಂತೆ ಹಿಂದಿಯ ಅನೇಕ ಚಿತ್ರಗಳಿಗೆ ಛಾಯಾಗ್ರಹಣ ಮಾಡಿದ್ದಾರೆ.
ಮಲೆಯಾಳಂನ ಸೂಪರ್ ಹಿಟ್ ‘ಅಯ್ಯಪ್ಪನ್ ಕೋಶಿಯಂ‘ ಸಿನಿಮಾದ ರಿಮೇಕ್ ಆಗಿರುವ 'ಭೀಮ್ಲಾ ನಾಯಕ್' ಸಿನಿಮಾವನ್ನು ಸಾಗರ್ ಕೆ ಚಂದ್ರಾ ಅವರು ನಿರ್ದೇಶಿಸಿದ್ದಾರೆ. ಪವನ್ ಕಲ್ಯಾಣ್, ರಾಣಾ ದಗ್ಗುಭಾಟಿ, ನಿತ್ಯಾ ಮೆನನ್, ಸಂಯುಕ್ತಾ ಮೆನನ್ ಪ್ರಮುಖ ತಾರಾಗಣದಲ್ಲಿದ್ದಾರೆ. ಸಿತಾರಾ ಎಂಟರಟೈನ್ಮೆಂಟ್ ಸಂಸ್ಥೆ ಈ ಚಿತ್ರವನ್ನು ನಿರ್ಮಾಣ ಮಾಡಿದೆ.