ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರತಿಭಾ ಸಂಪದ’ ಚಿತ್ರರಂಗ ಸೇರ ಬಯಸುವ ಪ್ರತಿಭೆಗಳಿಗಿದು ಅವಕಾಶದ ಹೆಬ್ಬಾಗಿಲು

Last Updated 28 ಡಿಸೆಂಬರ್ 2020, 15:00 IST
ಅಕ್ಷರ ಗಾತ್ರ

ಸಿನಿಘಮಾ ಸಂಸ್ಥೆ ಚಾಮುಂಡೇಶ್ವರಿ ಸ್ಟುಡಿಯೊದ ಬೆಂಬಲ ಮತ್ತು ಸಹಕಾರದೊಂದಿಗೆ ‘ಪ್ರತಿಭಾ ಸಂಪದ’ ಎಂಬ ಯೋಜನೆಯೊಂದನ್ನು ರೂಪಿಸಿದೆ. ಇದು ಚಿತ್ರರಂಗದ ಎಲ್ಲಾ ವಲಯದಲ್ಲಿನ ವಿಭಿನ್ನ ಪ್ರತಿಭೆಗಳನ್ನು ಗುರುತಿಸಿ, ಚಿತ್ರಜಗತ್ತಿಗೆ ಅವರನ್ನು ಪರಿಪಕ್ವವಾಗಿ ಪರಿಚಯಿಸುವ ಕಾರ್ಯಕ್ರಮ. ಸಿನಿಘಮಾ ಸಂಸ್ಥೆಯು 100 ಕಿರುಚಿತ್ರಗಳನ್ನು ನಿರ್ಮಿಸಲು ಯೋಜಿಸಿದೆ. ಅಲ್ಲಿನ ಪ್ರತಿಭೆಗಳನ್ನು ಬಳಸಿಕೊಂಡು ಆನಂತರದ ದಿನಗಳಲ್ಲಿ 10 ಸಿನಿಮಾ ಮಾಡಲು ಯೋಜಿಸಿದೆ. ಈ ಯೋಜನೆಗೆ ಯಶಸ್ವಿ 50ನೇ ವರ್ಷಾಚರಣೆಯಲ್ಲಿರುವ ಚಾಮುಂಡೇಶ್ವರಿ ಸ್ಟುಡಿಯೊ ಸಕಲ ರೀತಿಯಲ್ಲಿ ನೆರವು ನೀಡಲು ಕೈ ಜೋಡಿಸಿದೆ ಎಂದು ಸಿನಿಘಮಾದ ಮುಖ್ಯಸ್ಥ ಎಂ.ಎಲ್ ಪ್ರಸನ್ನ ತಿಳಿಸಿದರು.

ಚಾಮುಂಡೇಶ್ವರಿ ಸ್ಟುಡಿಯೊದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಈ 100 ಕಿರುಚಿತ್ರಗಳಲ್ಲಿ 10 ಕಿರುಚಿತ್ರಗಳನ್ನು ಕನ್ನಡದ ಹೆಸರಾಂತ ನಿರ್ದೇಶಕರು ನಿರ್ದೇಶಿಸಲಿದ್ದಾರೆ. ಆ ಮೂಲಕ ಹೊಸಬರಿಗೆ ಗುಣಮಟ್ಟವನ್ನು ಉಳಿದ 90 ಕಿರುಚಿತ್ರಗಳನ್ನು ನಿರ್ಮಿಸಲು 45 ತಂಡಗಳನ್ನು ಆಯ್ಕೆ ಮಾಡಲಾಗುತ್ತದೆ. ಪ್ರತಿ ತಂಡಕ್ಕೆ 2 ಕಿರುಚಿತ್ರದ ಜವಾಬ್ದಾರಿ ನೀಡಲಾಗುತ್ತದೆ. ಅದರಲ್ಲೊಂದು ಮನರಂಜನಿಯವಾದರೆ, ಇನ್ನೊಂದು ಮನಮುಟ್ಟುವಂಥ ಪ್ರೀತಿ, ಸಹನೆ, ಸಾಮಾಜಿಕ ತಲ್ಲಣದಂಥ ಕತೆಯನ್ನು ಆಯ್ದುಕೊಳ್ಳಬೇಕು. 100 ಕಿರುಚಿತ್ರಗಳಲ್ಲಿ ಆಯ್ದ 60 ಕಿರುಚಿತ್ರೋತ್ಸವ ಜುಲೈ ಕೊನೇ ವಾರದಲ್ಲಿ 6 ದಿನಗಳ ಕಾಲ ಪ್ರದರ್ಶಿಸಲಾಗುವುದು. ಚಿತ್ರರಂಗದ ಗಣ್ಯರು ಇದರಲ್ಲಿ ಭಾಗವಹಿಸಿಲಿದ್ದಾರೆ. ಕೊನೇ ಏಳನೆ ದಿನದ ಸಮಾರೋಪ ಸಮಾರಂಭದಲ್ಲಿ ಆಯ್ದ 10 ತಂಡಗಳಿಗೆ ಚಲನಚಿತ್ರವನ್ನು ನಿರ್ಮಾಣದ ಘೋಷಣೆ ಮಾಡಲಾಗುತ್ತದೆ. ಹಾಗಾಗಿ ಸಿನಿಘಮಾದ ಜಾಲತಾಣದಲ್ಲಿ ಈಗಲೇ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ’ ಎಂದಿದ್ದಾರೆ.

ಅದೇ ರೀತಿ ಚಾಮುಂಡೇಶ್ವರಿ ಸ್ಟುಡಿಯೊದ ಮುಖ್ಯಸ್ಥ ಶಡಗೋಪನ್ ಮಾತನಾಡಿ, ‘ಕಳೆದ ಎರಡು ವರ್ಷದ ಹಿಂದೆಯೇ ಈ ಬಗ್ಗೆ ನನ್ನ ಮತ್ತು ಪ್ರಸನ್ನ ಅವರ ನಡುವೆ ಚರ್ಚೆಯಾಗಿತ್ತು. ಒಂದೊಳ್ಳೆ ಪರಿಕಲ್ಪನೆ ಸಿದ್ಧಪಡಿಸುವಂತೆ ಹೇಳಿದ್ದೆ. ಅದರಂತೆ ಒಂದು ಅದ್ಭುತವಾದ ಪರಿಕಲ್ಪನೆಯ ಜತೆಗೆ ಆಗಮಿಸಿದ್ದಾರೆ. ಸಿನಿಘಮಾದಲ್ಲಿ ಕೇವಲ ಸಿನಿಮಾ ಅಷ್ಟೇ ಅಲ್ಲದೆ, ಉದ್ಯೋಗಾವಕಾಶ ಮತ್ತು ಸಿನಿಮಾ ಆಡಿಷನ್‌ಗಳ ಬಗ್ಗೆಯೂ ಮಾಹಿತಿ ಇರಲಿದೆ. ಬೇಕಾದವರು ನೇರವಾಗಿ ಅವರನ್ನೇ ಸಂಪರ್ಕಿಸಬಹುದಾಗಿದೆ. ಒಟ್ಟಾರೆಯಾಗಿ ಒಂದೇ ವೇದಿಕೆಯಲ್ಲಿ ಸಿನಿಮಾ ಸೇರಿ ಹಲವು ವಿಚಾರಗಳ ಗುಚ್ಛ ಇಲ್ಲಿ ದೊರಕಲಿದೆ’ ಎಂದರು.

ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ನಿರ್ದೇಶಕ ಶಶಾಂಕ್‌ ಪರಿಕಲ್ಪನೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ‘ನಾನು 10 ವರ್ಷದಿಂದ ಅನುಭವಿಸುತ್ತಿರುವ ಯಾತನೆ ಇದು. ನನ್ನ ಬಹುತೇಕ ಸಿನಿಮಾಗಳಲ್ಲಿ ಹೊಸಬರೇ ಕಾಣಿಸುತ್ತಾರೆ. ಆದರೆ, ಹೊಸಬರನ್ನು ಹುರುಕುವುದೇ ದೊಡ್ಡ ಸವಾಲು. ಎಲ್ಲವೂ ಮೊದಲಿನಂತಿಲ್ಲ. ಹರಿದು ಹಂಚಿಹೋಗಿದೆ. ನಮ್ಮ ಕನ್ನಡದಲ್ಲಿ ಕಾಸ್ಟಿಂಗ್ ನಿರ್ದೇಶಕರಿಲ್ಲ. ನಮಗೆ ಬೇಕಾದವರನ್ನು ನಾವೇ ಆಯ್ದುಕೊಳ್ಳಬೇಕು. ಇಂಥ ಸಮಯದಲ್ಲಿ ಮೆಡಿಸಿನ್ ರೀತಿಯಲ್ಲಿ ಹೊಸ ಹೊಸ ಪ್ರತಿಭೆಗಳನ್ನು ಸಿನಿಘಮಾ ಮೂಲಕ ಪರಿಚಯಿಸಬಹುದು. ಇಡೀ ತಂಡದ ಕನಸು ನನಸಾಗಲಿ’ ಎಂದು ಶುಭ ಹಾರೈಸಿದ್ದಾರೆ.

50ನೇ ವರ್ಷಾಚರಣೆಯ ಸಂಭ್ರಮದಲ್ಲಿ ಚಾಮುಂಡೇಶ್ವರಿ ಸ್ಟುಡಿಯೊ

ಚಾಮುಂಡೇಶ್ವರಿ ಸ್ಟುಡಿಯೊ ಕಳೆದ 50 ವರ್ಷಗಳಿಂದ ಕನ್ನಡ ಸಿನಿಮಾರಂಗಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದೆ. ಇದೀಗ ಈ ಸ್ಟುಡಿಯೊ 5 ದಶಕ ಪೂರೈಸಿದ ಹಿನ್ನೆಲೆಯಲ್ಲಿ ಈ ವಿಶೇಷ ಕಾರ್ಯಕ್ಕೆ ಇಳಿದಿದ್ದು ಪ್ರತಿಭಾ ಸಂಪದಕ್ಕೆ ಮುಂದಾಗಿದೆ.

ಸಿನಿಘಮಾದಲ್ಲಿ ಏನೆಲ್ಲ ಇರಲಿದೆ

ಸಿನಿಮಾ ಜಗತ್ತಿನ ಹಲವು ಆಯಾಮಗಳನ್ನು ನಿಮ್ಮ ಮುಂದೆ ತೆರೆದಿಡಲು ಮನರಂಜನೆ, ಸಿನಿಮಾ ಟ್ರೇಲರ್, ಸಿನಿಮಾ ಮತ್ತು ಕಿರುತೆರೆ ಸುದ್ದಿಗಳು, ಚಿತ್ರ ಸಂಚಯ, ತಾರೆಯರ ಕುರಿತು ಮಾಹಿತಿ, ಗಾಸಿಪ್ ಸೇರಿ ಹಲವು ವಿಚಾರಗಳ ಸಿನಿಘಮಾದಲ್ಲಿ ಇರಲಿದೆ. ಸಿನಿಮಾರಂಗ ಪ್ರವೇಶ ಬಯಸುವವರಿಗೆ ಸೇತುವೆಯಾಗಿ, ದಾರಿದೀಪವಾಗಿ ಮಾಹಿತಿ ಒದಗಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT