ನಿರ್ದೇಶಕ ರಾಜಮೌಳಿ ‘ಬಾಹುಬಲಿ’ ಚಿತ್ರದಲ್ಲಿ ಸೃಷ್ಟಿಸಿದ ಶಿವಗಾಮಿ ಪಾತ್ರವನ್ನು ಭಾರತೀಯ ಸಿನಿಪ್ರೇಕ್ಷಕರು ಎಂದಿಗೂ ಮರೆಯಲು ಸಾಧ್ಯವಿಲ್ಲ. ಈ ಪವರ್ಫುಲ್ ಪಾತ್ರಕ್ಕೆ ಜೀವ ತುಂಬಿದ್ದು ಹಿರಿಯ ನಟಿ ರಮ್ಯಾ ಕೃಷ್ಣ.
ಅಂದಹಾಗೆ ರಮ್ಯಾ ಕೃಷ್ಣ ಅವರು ಈ ಪಾತ್ರಕ್ಕೆ ರಾಜಮೌಳಿ ಅವರ ಮೊದಲ ಆಯ್ಕೆಯಾಗಿರಲಿಲ್ಲವಂತೆ. ಶ್ರೀದೇವಿ ಅವರನ್ನು ಶಿವಗಾಮಿಯಾಗಿ ತೆರೆಯ ಮೇಲೆ ತೋರಿಸಲು ಅವರು ಇಚ್ಛಿಸಿದ್ದರಂತೆ. ಆದರೆ, ಸಂಭಾವನೆಯಲ್ಲಿ ಹೊಂದಾಣಿಕೆಯಾಗದಿದ್ದರಿಂದ ಆ ಪಾತ್ರ ರಮ್ಯಾಕೃಷ್ಣಗೆ ಒಲಿಯಿತು ಎನ್ನುವುದು ಈಗ ಹಳೆಯ ಸುದ್ದಿ. ಆದರೆ, ಹೊಸ ಸುದ್ದಿ ಅದಲ್ಲ. ಸೆ. 15ಕ್ಕೆ ರಮ್ಯಾ ಕೃಷ್ಣ ಅವರ ಜನ್ಮ ದಿನ. ಅಂದು ಅವರು ಮುಖ್ಯ ಭೂಮಿಕೆಯಲ್ಲಿರುವ ‘ಶಿವಗಾಮಿ’ ಚಿತ್ರದ ಲಿರಿಕಲ್ ಹಾಡು ಬಿಡುಗಡೆಯಾಗಲಿದೆ.
ಶ್ರೀವಿಘ್ಣೇಶ್ ಕಾರ್ತಿಕ್ ಸಿನಿಮಾಸ್ ಲಾಂಛನದಡಿ ಜಿ. ಶ್ರೀಧರ್ ನಿರ್ಮಿಸಿರುವ ಈ ಚಿತ್ರದ ‘ಆಡುವೆ ನಾನು ರತಿ ಶಿವಗಾಮ’ ಹಾಡು ಅಂದು ಸಂಜೆ ಆದಿತ್ಯ ಮ್ಯೂಸಿಕ್ನಲ್ಲಿ ಬಿಡುಗಡೆಯಾಗಲಿದೆ. ವಿ. ನಾಗೇಂದ್ರಪ್ರಸಾದ್ ಬರೆದಿರುವ ಈ ಹಾಡಿಗೆ ಅನುರಾಧ ಭಟ್ ಧ್ವನಿಯಾಗಿದ್ದಾರೆ.
ಮಧು ಮಿಣಕನಗುರ್ಕಿ ಈ ಚಿತ್ರ ನಿರ್ದೇಶಿಸಿದ್ದಾರೆ. ಜೊತೆಗೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯ ನೊಗವನ್ನೂ ಅವರೇ ಹೊತ್ತಿದ್ದಾರೆ. ಕನ್ನಡ, ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಅನುಭವ ಹೊಂದಿದ್ದಾರೆ. ಈಗಾಗಲೇ, ಚಿತ್ರದ ಪ್ರಥಮ ಪ್ರತಿಯೂ ಸಿದ್ಧವಾಗಿದೆ. ಕನ್ನಡ, ತೆಲುಗು, ತಮಿಳು, ಮಲಯಾಳದಲ್ಲಿ ಸಿನಿಮಾ ಬಿಡುಗಡೆಗೆ ಸಿದ್ಧತೆ ನಡೆದಿದೆ.
ರಮ್ಯಾ ಕೃಷ್ಣ ಚಿತ್ರದಲ್ಲಿ 9ನೇ ಶತಮಾನದ ರಾಣಿಯಾಗಿ ಕಾಣಿಸಿಕೊಂಡಿದ್ದಾರಂತೆ. ಜೊತೆಗೆ ಅವರದು ಅಗ್ರೆಸಿವ್ ಆದ ಪಾತ್ರ. ಚಿತ್ರದಲ್ಲಿ ಕಾಮಿಡಿ ಮತ್ತು ಹಾರರ್ ಕೂಡ ಇದೆ. ಮಧು ಅವರು ಎರಡು ಕಾಲಘಟ್ಟದ ಕಥೆ ಹೆಣೆದಿದ್ದಾರೆ. 9ನೇ ಶತಮಾನ ಮತ್ತು 21ನೇ ಶತಮಾನದ ಕಥೆಗಳೆರಡರಲ್ಲೂ ರಮ್ಯಾ ಕೃಷ್ಣ ಕಾಣಿಸಿಕೊಂಡಿದ್ದಾರೆ.