ಸಿನಿಮಾ ಎಂಬುದು ಈಗ ಅತಿ ಹೆಚ್ಚು ಜನರನ್ನು ಸೆಳೆಯುತ್ತಿರುವ ಮನರಂಜನೆಯ ಮಾಧ್ಯಮ. ಸಿನಿ ಪ್ರೇಮಿಗಳಿಗೆ ಭಾಷೆಯ ಹಂಗಿಲ್ಲ. ಕನ್ನಡ, ಹಿಂದಿ, ತಮಿಳು, ತೆಲುಗು ಯಾವ ಭಾಷೆಯ ಸಿನಿಮಾದರೂ ಸರಿ ನೋಡುತ್ತಾರೆ. ಅಲ್ಲದೇ ತಮ್ಮ ನೆಚ್ಚಿನ ಹೀರೊ, ಹೀರೊಯಿನ್ಗಳ ಹೆಸರಿನಲ್ಲಿ ಅಭಿಮಾನಿ ಬಳಗ ಕಟ್ಟಿಕೊಂಡಿರುತ್ತಾರೆ. ಕೆಲವೊಮ್ಮೆ ಈ ಅಭಿಮಾನವೇ ಅತಿರೇಕಕ್ಕೆ ಹೋಗಿ ರೊಚ್ಚಿಗೇಳುವಂತೆ ಆಗಿದ್ದೂಇದೆ.
ಇಬ್ಬರು ಸ್ಟಾರ್ ನಟರ ಅಭಿಮಾನಿಗಳ ನಡುವೆ ಮುಸುಕಿನ ಗುದ್ದಾಟಗಳು ನಡೆಯುವುದು ಎಲ್ಲ ಭಾಷೆಗಳ ಸಿನಿರಂಗದಲ್ಲೂ ಸಾಮಾನ್ಯ. ಈಗ ತೆಲುಗು ಸಿನಿರಂಗದ ಸ್ಟಾರ್ಗಳಾದ ಮಹೇಶ್ಬಾಬು ಹಾಗೂ ಅಲ್ಲು ಅರ್ಜುನ್ ಅಭಿಮಾನಿಗಳ ನಡುವೆ ಚಿತ್ರ ಬಿಡುಗಡೆ ದಿನಾಂಕಕ್ಕೆ ಸಂಬಂಧಿಸಿದಂತೆ ಭಾವನಾತ್ಮಕ ಗುದ್ದಾಟ ಆರಂಭವಾಗಿದೆ. ಯಾವುದೇ ಸಿನಿಮಾವಾಗಲಿ ಚಿತ್ರಕಥೆಯೇ ಕ್ಲಿಕ್ ಆಗುವುದು. ಸಿನಿಮಾದಲ್ಲಿ ಚಿತ್ರಕಥೆಯೇ ರಾಜನಿದ್ದಂತೆ. ಆದರೆ, ಸ್ಕ್ರಿಪ್ಟ್ಗಿಂತ ಸೆಂಟಿಮೆಂಟೇಚಿತ್ರವನ್ನು ಗೆಲ್ಲಿಸುತ್ತದೆ ಎಂಬುದು ಕೆಲವು ನಟರ ನಂಬಿಕೆ. ಇದು ಕೆಲವೊಮ್ಮೆ ಸತ್ಯವಾಗಿರುವುದು ಇದೆ.
ಈಗ ಬಹು ನಿರೀಕ್ಷಿತ ಚಿತ್ರ ಮಹೇಶ್ಬಾಬು ನಟನೆಯ ‘ಸರಿಲೇರು ನಿಕೆವ್ವರು’ಹಾಗೂ ‘ಅಲಾ ವೈಕುಂಟಪುರಮುಲೋ’ ಚಿತ್ರಗಳ ಬಿಡುಗಡೆಯ ವಿಷಯಕ್ಕೆ ಗಲಾಟೆ ನಡೆಯುತ್ತಿದೆ. ಈ ಎರಡೂ ಸಿನಿಮಾಗಳು ಮುಂದಿನ ಸಂಕ್ರಾಂತಿ ಸಮಯಕ್ಕೆ ಬಿಡುಗಡೆಯಾಗುವ ಯೋಜನೆ ಹಾಕಿಕೊಂಡಿವೆ.
ಚಿತ್ರತಂಡಗಳ ಪ್ರಕಾರ ಈ ಎರಡೂ ಸಿನಿಮಾಗಳ ಬಿಡುಗಡೆಯ ದಿನಗಳ ನಡುವೆ ಹೆಚ್ಚಿನ ಅಂತರವಿರುವುದಿಲ್ಲ. ಆದರೆ, ಯಾವ ಸಿನಿಮಾ ಮೊದಲು ಬಿಡುಗಡೆಯಾಗುತ್ತದೆ ಎಂಬುದು ಮುಖ್ಯವಾಗುತ್ತದೆ. ಯಾವುದೇ ದೊಡ್ಡ ನಟರ ಸಿನಿಮಾದ ಬಿಡುಗಡೆ ಹಂತದಲ್ಲಿ ವಿಚಿತ್ರ ಭಾವನಾತ್ಮಕತೆಯ ಕಾರಣದಿಂದ ಚಿತ್ರತಂಡ ಹಾಗೂ ನಾಯಕ ನಟರು ತಮ್ಮ ಸಿನಿಮಾವನ್ನು ಮೊದಲು ಬಿಡುಗಡೆ ಮಾಡಲು ಸಿದ್ಧರಿರುವುದಿಲ್ಲ. ಆದರೆ ಇತ್ತೀಚಿನ ಸಮೀಕ್ಷೆಯ ಪ್ರಕಾರ ಸಂಕ್ರಾಂತಿ ಸಮಯಕ್ಕೆ ಮೊದಲು ಬಿಡುಗಡೆಯಾಗುವ ಚಿತ್ರವೇ ಗಲ್ಲಾಪೆಟ್ಟಿಗೆಯಲ್ಲಿ ಹೆಚ್ಚಿನ ಗಳಿಕೆ ಮಾಡುವುದಿಲ್ಲ ಎಂಬ ಸುದ್ದಿಯೂ ಇದೆ. ಎನ್ಟಿಆರ್ ಕಥಾನಾಯಕುಡು, ಅಜ್ಞಾತವಾಸಿಯಂತಹ ಸಿನಿಮಾಗಳು ಸಂಕ್ರಾಂತಿಗೆ ಮೊದಲು ಬಿಡುಗಡೆಗೊಂಡು ಥಿಯೇಟರ್ನಲ್ಲಿ ಬಹಳ ದಿನ ಓಡಲಿಲ್ಲ.
ಈ ಕಾರಣಕ್ಕೆ ಈ ಇಬ್ಬರೂ ನಟರು ಮೊದಲು ಸಿನಿಮಾ ಬಿಡುಗಡೆ ಮಾಡಲು ಸಿದ್ಧರಿಲ್ಲ. ಇದರಿಂದ ತಯಾರಕರು ಚಿತ್ರತಂಡವನ್ನು ಬಿಡುಗಡೆಗೆ ಒಪ್ಪಿಸಲು ಪರದಾಡುವಂತಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.