ನಿನ್ನೆಯಷ್ಟೇ ತಮ್ಮ ಹುಟ್ಟುಹಬ್ಬವನ್ನು ಅತ್ಯಂತ ಸರಳವಾಗಿ ಆಚರಿಸಿಕೊಂಡಿರುವ ನಟ ವಸಿಷ್ಠ ಸಿಂಹ ಅವರು ಅಭಿಮಾನಿಗಳಿಗೆ ಖುಷಿ ಸುದ್ದಿಯೊಂದನ್ನು ನೀಡಿದ್ದಾರೆ.
ಅವರ ಅಭಿನಯದ ಹೊಸ ಚಿತ್ರವೊಂದು ಸದ್ಯದಲ್ಲೇ ಸೆಟ್ಟೇರಲಿದ್ದು, ಈ ತಿಂಗಳಾಂತ್ಯಕ್ಕೆ ಮುಹೂರ್ತ ನಡೆಯಲಿದೆ. ಅದೇ ವೇಳೆಗೆ ಚಿತ್ರದ ಶೀರ್ಷಿಕೆಯೂ ಘೋಷಣೆಯಾಗಲಿದೆಯಂತೆ.
ವಸಿಷ್ಠ ಸಿಂಹ ನಾಯಕರಾಗಿ ನಟಿಸುತ್ತಿರುವ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಖ್ಯಾತ ನಟ ಕಿಶೋರ್ ಕೂಡ ಕಾಣಿಸಿಕೊಳುತ್ತಿದ್ದಾರೆ.
ಜನರತ್ನ ಪ್ರೊಡಕ್ಷನ್ಸ್ ಲಾಂಛನದಲ್ಲಿ ಜನಾರ್ಧನ ವಿ. ಅವರು ಬಂಡವಾಳ ಹೂಡಲಿದ್ದಾರೆ. ಈ ಚಿತ್ರಕ್ಕೆ ವಚನ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ನಿರ್ದೇಶಕ ಪವನ್ ಕುಮಾರ್ ಜತೆ ‘ಲೂಸಿಯಾ’ ಚಿತ್ರದಲ್ಲಿ ಸಹ ನಿರ್ದೇಶಕರಾಗಿ ವಚನ್ ಕಾರ್ಯನಿರ್ವಹಿಸಿದ್ದರು. ಇದು ಇವರಿಗೆ ಚೊಚ್ಚಲ ನಿರ್ದೇಶನದ ಚಿತ್ರ.
ಅನೂಪ್ ಸೀಳಿನ್ ಸಂಗೀತವಿರುವ ಈ ಚಿತ್ರಕ್ಕೆ ‘ಮಫ್ತಿ’ ಖ್ಯಾತಿಯ ನವೀನ್ ಕುಮಾರ್ ಐ. ಅವರ ಛಾಯಾಗ್ರಹಣ, ಹರೀಶ್ ಕೊಮ್ಮೆ ಅವರ ಸಂಕಲನವಿದೆ. ‘ಟಗರು’ ಖ್ಯಾತಿಯ ಮಾಸ್ತಿ ಸಂಭಾಷಣೆ ಬರೆಯುತ್ತಿದ್ದಾರೆ.