ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಷ್ಣುವಿನ ಸಾಹಸ ಯಾತ್ರೆ

Last Updated 5 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

‘ಪಡ್ಡೆಹುಲಿ’ ಚಿತ್ರದ ಬಳಿಕ ಶ್ರೇಯಸ್‌ ಮಂಜು ನಟಿಸುತ್ತಿರುವ ಎರಡನೇ ಚಿತ್ರ ‘ವಿಷ್ಣು ಪ್ರಿಯ’. ನವಿರು ಪ್ರೇಮದ ಸುತ್ತ ಇದರ ಕಥೆ ಹೆಣೆಯಲಾಗಿದೆ. ತೊಂಬತ್ತರ ದಶಕದಲ್ಲಿ ನಡೆಯುವ ಕಥೆ ಇದು. ಇದಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿರುವುದು ವಿ.ಕೆ. ಪ್ರಕಾಶ್‌.

ಶ್ರೇಯಸ್‌ ಅವರು ನಿರ್ಮಾಪಕ ಕೆ. ಮಂಜು ಅವರ ಪುತ್ರ. ಮಂಜು ಅವರು ದಿವಂಗತ ವಿಷ್ಣುವರ್ಧನ್‌ ಅವರ ಮೇಲಿನ ಪ್ರೀತಿಗಾಗಿ ಚಿತ್ರಕ್ಕೆ ‘ವಿಷ್ಣು ಪ್ರಿಯ’ ಎಂದು ಹೆಸರಿಟ್ಟಿದ್ದಾರಂತೆ. ಕನ್ನಡ ಸೇರಿದಂತೆ ಮಲಯಾಳ, ತಮಿಳು, ತೆಲುಗಿನಲ್ಲಿಯೂ ಈ ಸಿನಿಮಾ ನಿರ್ಮಿಸುವ ಇರಾದೆ ಅವರದು.

ಈ ಚಿತ್ರಕ್ಕಾಗಿ ಕಳೆದ ಹತ್ತು ದಿನಗಳಿಂದ ಸಾಹಸ ದೃಶ್ಯಗಳ ಜೊತೆಗೆ ಹಾಡಿನ ಚಿತ್ರೀಕರಣ ಕೂಡ ನಡೆಸಲಾಗಿದೆ. ಕೊಚ್ಚಿಯ ಆದ್ರಪಲ್ಲಿ ಜಲಪಾತದ ಸುತ್ತಮುತ್ತ ಚಿತ್ರತಂಡ ಒಂದು ಹಾಡಿನ ಚಿತ್ರೀಕರಣ ನಡೆಸಿದೆ. ಮಹಾಗಣಿ ಅರಣ್ಯದಲ್ಲಿ ಸಾಹಸ ದೃಶ್ಯಗಳನ್ನು ಚಿತ್ರೀಕರಿಸಿದೆ. 50ಕ್ಕೂ ಹೆಚ್ಚು ಸಾಹಸ ಕಲಾವಿದರು ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದರು. ಅಂದಹಾಗೆ ಸಾಹಸ ನಿರ್ದೇಶಿಸಿರುವುದು ವಿಕ್ರಮ್. ವಿನೂತನ ಶೈಲಿಯಲ್ಲಿ ಸಾಹಸ ದೃಶ್ಯಗಳನ್ನು ಸಂಯೋಜಿಸಲಾಗಿದೆ. ಚಿತ್ರದ ಶೂಟಿಂಗ್‌ ಅಂತಿಮ ಘಟ್ಟ ತಲುಪಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಮಲಯಾಳದ ಚಿತ್ರಗಳಲ್ಲಿ ನಟಿಸಿರುವ ಕಣ್ಸನ್ನೆ ಬೆಡಗಿ ಪ್ರಿಯಾ ವಾರಿಯರ್‌ ಇದರ ನಾಯಕಿ. ಕನ್ನಡದಲ್ಲಿ ಇದು ಅವರ ಮೊದಲ ಚಿತ್ರ.‌ ಗೋಪಿ ಸುಂದರ್ ಸಂಗೀತ ನೀಡಿದ್ದಾರೆ. ರವಿ ಶ್ರೀವತ್ಸ ಚಿತ್ರಕಥೆ ಮತ್ತು ಸಂಭಾಷಣೆಯ ಜವಾಬ್ದಾರಿ ನಿಭಾಯಿಸಿದ್ದಾರೆ. ಸುರೇಶ್ ಅರಸ್ ಅವರ ಸಂಕಲನವಿದೆ. ಮೋಹನ್ ಪಂಡಿತ್‌ ಅವರ ಕಲಾ ನಿರ್ದೇಶನವಿದೆ. ಛಾಯಾಗ್ರಹಣ ವಿನೋದ್ ಭಾರತಿ ಅವರದು.

ಅಚ್ಯುತ್ ಕುಮಾರ್, ಚಿತ್ಕಲಾ, ಅಶ್ವಿನಿ ಗೌಡ, ಸುಚೇಂದ್ರಪ್ರಸಾದ್, ನವೀನ್ ಪಡಿಯಾಲ್ ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT