ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾಗಳಲ್ಲಿ ಸಾರ್ವಕಾಲಿಕ ಸತ್ಯ ಹೇಳಿದ್ದ ಸತ್ಯಜಿತ್‌ ರೇ: ಬಿ. ಸುರೇಶ್‌

Last Updated 12 ಸೆಪ್ಟೆಂಬರ್ 2021, 17:05 IST
ಅಕ್ಷರ ಗಾತ್ರ

ಬೆಂಗಳೂರು: ‘ಸತ್ಯಜಿಯ್‌ ರೇ ಅವರು ಭಾರತೀಯ ಸಿನಿಮಾ ರಂಗ ಕಂಡ ವಿಭಿನ್ನವಾದ ರಾಜಕೀಯ ಮತ್ತು ವೈಚಾರಿಕ ಚಿಂತನೆಯುಳ್ಳ ನಿರ್ದೇಶಕ. ಈ ಕಾರಣಕ್ಕಾಗಿಯೇ ಹಲವು ದಶಕಗಳ ಬಳಿಕವೂ ಅವರ ಚಿತ್ರಗಳು ವರ್ತಮಾನದ ತಲ್ಲಣಗಳಿಗೆ ಸ್ಪಂದಿಸುತ್ತಿವೆ’ ಎಂದು ನಿರ್ದೇಶಕ ಬಿ. ಸುರೇಶ್‌ ಅಭಿಪ್ರಾಯಪಟ್ಟರು.

ಸಹಯಾನ– ಕೆರೆಕೋಣ, ಸಮುದಾಯ– ಕರ್ನಾಟಕ, ಜನಶಕ್ತಿ ಮಾಧ್ಯಮ ಜಂಟಿಯಾಗಿ ಆಯೋಜಿಸಿರುವ ‘ಸತ್ಯಜಿತ್‌ ರಾಯ್‌–100’ ಕುರಿತ ವೆಬಿನಾರ್‌ ಸರಣಿಯ ಎರಡನೇ ಉಪನ್ಯಾಸ ಮಾಲಿಕೆಯಲ್ಲಿ ಭಾನುವಾರ ಅವರು ಮಾತನಾಡಿದರು. ‘ಸತ್ಯಜಿತ್‌ ರೇ ಅವರ ಸಿನಿಮಾಗಳು ಕೋವಿಡ್‌ ಕಾಲದ ಬಿಕ್ಕಟ್ಟಿಗೂ ಸ್ಪಂದಿಸುವಂತೆ ಇವೆ. ಲಾಕ್‌ಡೌನ್‌ ಅವಧಿಯಲ್ಲಿ ಹಸಿವಿನ ಕಾರಣದಿಂದಾಗಿ ನಡೆದುಹೋದ ಅನೇಕ ಘಟನಾವಳಿಗಳು ಹಲವು ದಶಕಗಳ ಹಿಂದೆ ಬಂದ ಅವರ ಸಿನಿಮಾಗಳಲ್ಲಿ ಕಾಣಬಹುದು’ ಎಂದರು.

ಒಂದು ಕುಟುಂಬದ ಎರಡು ವ್ಯಕ್ತಿತ್ವಗಳನ್ನು ಪ್ರಧಾನವಾಗಿ ಇರಿಸಿಕೊಂಡು ಲಕ್ಷಾಂತರ ಮಂದಿಯ ಸಾವು, ನೋವು, ಸಂಕಟಗಳಿಗೆ ಹೇಗೆ ದನಿಯಾಗಬಹುದು ಎಂಬುದನ್ನು ಸತ್ಯಜಿತ್‌ ತೋರಿಸಿದ್ದರು. ಮೇಲ್ನೋಟಕ್ಕೆ ಎಲ್ಲವೂ ಸರಿ ಇರುವಂತಹ ಸಮಾಜದಲ್ಲಿ ಒಳ ಹರಿವಿನೊಳಗೆ ಬೇರೆಯದೇ ಚಿತ್ರಣ ಇರುತ್ತದೆ ಎಂಬುದನ್ನು ಅವರು ತೋರಿಸುತ್ತಿದ್ದರು. ಒಂದು ದೃಶ್ಯದಿಂದ ಮತ್ತೊಂದು ದೃಶ್ಯಕ್ಕೆ ಅವರು ಸಾಗುತ್ತಿದ್ದ ಪರಿಯೇ ಅದ್ಭುತ. ಇದಕ್ಕೆ ‘ಆಶಾನಿ ಸಂಕೇತ್‌’ ಚಿತ್ರ ಉತ್ತಮ ಉದಾಹರಣೆ ಎಂದರು.

ಹಲವು ಪ್ರತಿಮೆಗಳ ಸರಣಿಯ ಮೂಲಕ ಕಥನದ ಸರಣಿಯನ್ನು ದಾಟಿಸುವ ಪ್ರಯತ್ನವನ್ನು ಗಿರೀಶ್‌ ಕಾಸರವಳ್ಳಿ ಅವರ ಚಿತ್ರಗಳಲ್ಲೂ ಕಾಣಬಹುದು. ಸತ್ಯಜಿತ್‌ ರೇ ಅವರ ಚಿತ್ರಗಳಂತೆಯೇ ಅದ್ಭುತವಾದ ಕಥನ ಸರಣಿಯನ್ನು ಕಾಸರವಳ್ಳಿಯವರ ಚಿತ್ರಗಳಲ್ಲಿಯೂ ನೋಡಬಹುದು ಎಂದು ಸುರೇಶ್ ವಿಶ್ಲೇಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT