‘ಗಾಳಿಪಟ–2’ ಸಿನಿಮಾ ಆಗಸ್ಟ್ 12ಕ್ಕೆ ಬಿಡುಗಡೆಯಾಗುತ್ತಿದೆ. ‘ಸ್ನೇಹವೇ ಬಹಳ ಕೈಹಿಡಿದಿದೆ’ ಎಂದು ಸದಾ ಹೇಳುತ್ತಿರುವ ಯೋಗರಾಜ್ ಭಟ್ ಎರಡನೇ ಭಾಗದಲ್ಲೂ ಸ್ನೇಹದ ಮಳೆಯನ್ನು ಸುರಿಸಿದ್ದಾರೆ. ಮೂವರು ಗೆಳೆಯರ ಕಥೆಯನ್ನು ಭಾವನಾತ್ಮಕವಾಗಿ ಹೆಣೆದಿದ್ದಾರೆ ಎನ್ನುವುದಕ್ಕೆ ಟ್ರೇಲರ್ ಸಾಕ್ಷ್ಯ. ಮೊದಲ ಭಾಗದಲ್ಲೇ ಬರುವ ಬಹುತೇಕ ಪಾತ್ರಗಳು ಎರಡನೇ ಭಾಗದಲ್ಲೂ ಬಣ್ಣಹಚ್ಚಿದ್ದು, ಮತ್ತೊಂದಿಷ್ಟು ಹೊಸ ಪಾತ್ರಗಳು ಸೇರಿಕೊಂಡಿವೆ. ಚಿತ್ರದಲ್ಲಿ ಗಣೇಶ್ ಅವರ ತಂದೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರಂಘಾಯಣ ರಘು, ಎರಡನೇ ಭಾಗದಲ್ಲೂ ಮಗನಿಗೆ ತಕ್ಕ ಶಾಸ್ತಿ ಮಾಡಿದ್ದಾರೆ. ಅನಂತನಾಗ್ ಅವರು ಇಲ್ಲಿ ಕನ್ನಡ ಮೇಸ್ಟ್ರಾಗಿದ್ದು, ‘ಕನ್ನಡ ಸಾಯುತ್ತೆ ಎನ್ನುವವರು ಬೇಗ ಸಾಯುತ್ತಾರೆ’ ಎನ್ನುತ್ತಾ ಮತ್ತೊಮ್ಮೆ ಸರ್ಕಾರಿ ಹಿ. ಪ್ರಾ. ಶಾಲೆ ಕಾಸರಗೋಡಿಗೆ ಪ್ರೇಕ್ಷಕರನ್ನು ಕೊಂಡೊಯ್ದಿದ್ದಾರೆ.