ಗಂಗಾ ನದಿಯಲ್ಲಿ ಚಿತ್ರೀಕರಣ ನಡೆಸಲು ತೆರಳುವಾಗ ಸಹಾಯಕ ನಿರ್ದೇಶಕರಾಗಿದ್ದ ಸದಾಶಿವಯ್ಯ ದೋಣಿಯಿಂದ ಕಾಲು ಜಾರಿ ನೀರಿಗೆ ಬಿದ್ದಿದ್ದರು. ಅವರನ್ನು ರಕ್ಷಿಸುವ ಪ್ರಯತ್ನ ನಡೆಸಿದರೂ ನೀರಿನ ರಭಸದ ಸೆಳವಿನಲ್ಲಿ ಅದು ಸಾಧ್ಯವಾಗಿರಲಿಲ್ಲ. ಅವರ ಸಾವಿನ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ಸಂತಾಪ ಸಭೆಯಾಗಿ ಮಾರ್ಪಟ್ಟಿತ್ತು. ಮೂರ್ನಾಲ್ಕು ಜನರ ಕೆಲಸಗಳನ್ನು ಒಬ್ಬರೇ ಮಾಡುತ್ತಿದ್ದ ಅವರ ಉತ್ಸಾಹ ಮತ್ತು ಬದ್ಧತೆಯನ್ನು ಚಿತ್ರತಂಡ ಸ್ಮರಿಸಿಕೊಂಡಿತು.
ಘಟನೆ ಬಳಿಕ ಹರಿದ್ವಾರದಿಂದ ವಾಪಸಾದ ಚಿತ್ರತಂಡ ನೋವಿನ ನೆನಪಿನ ನಡುವೆಯೂ ಬಾಕಿ ಉಳಿದ ಮಾತಿನ ಸನ್ನಿವೇಶಗಳನ್ನು ಶ್ರೀರಂಗಪಟ್ಟಣ ಸಮೀಪ ಚಿತ್ರೀಕರಿಸಿಕೊಂಡಿತು. ನಾಲ್ಕು ಹಾಡುಗಳ ಚಿತ್ರೀಕರಣ ನಡೆಸಬೇಕಿದ್ದು, ಅದಕ್ಕಾಗಿ ಮುಂದಿನ ತಿಂಗಳು ವಿದೇಶಿ ನೆಲಕ್ಕೆ ಹಾರಲು ಚಿತ್ರತಂಡ ಚಿಂತನೆ ನಡೆಸಿದೆ.
ನಿರ್ದೇಶಕ ಸೇನ್ ಪ್ರಕಾಶ್ ತಾವು ನಟ ಯೋಗೀಶ್ ಅಭಿಮಾನಿ ಎಂದು ಹೇಳಿಕೊಂಡರು.
ಯೋಗಿಯನ್ನು ಮನದಲ್ಲಿಟ್ಟುಕೊಂಡೇ ಅವರು ಕಥೆ ಹೆಣೆದಿದ್ದಾರಂತೆ. ಅಲ್ಲದೆ ಅವರನ್ನು ವಿಭಿನ್ನ ಗೆಟಪ್ನಲ್ಲಿ ತೋರಿಸುವ ಇರಾದೆಯೂ ಅವರಲ್ಲಿತ್ತು. ಅದು `ಅಂಬರ'ದ ಮೂಲಕ ಈಡೇರುತ್ತಿದೆಯಂತೆ. ಯೋಗೀಶ್ ಪಾತ್ರದಲ್ಲಿ ಮೂರು ವಿಭಿನ್ನ ಛಾಯೆಗಳಿವೆಯಂತೆ.