ಉತ್ತರ ಪ್ರದೇಶದ ಸರ್ಕಾರ ‘ಬಜರಂಗಿ ಭಾಯಿಜಾನ್’ ಚಿತ್ರಕ್ಕೆ ಯಾವುದೇ ತೆರಿಗೆ ವಿಧಿಸಿಲ್ಲ. ಈ ಕಾರಣಕ್ಕೆ ನಟ ಸಲ್ಮಾನ್, ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರಿಗೆ ಧನ್ಯವಾದ ಹೇಳಿದ್ದಾರೆ.
ಚಿತ್ರದ ನಿರ್ದೇಶಕ ಕಬೀರ್ ಖಾನ್ ಕೆಲ ದಿನಗಳ ಹಿಂದೆಯಷ್ಟೆ ಅಖಿಲೇಶ್ ಯಾದವ್ ಅವರನ್ನು ಭೇಟಿ ಮಾಡಿದ್ದರು. ಈ ಭೇಟಿಯ ನಂತರ ಉತ್ತರ ಪ್ರದೇಶದಲ್ಲಿ ‘ಬಜರಂಗಿ ಭಾಯಿಜಾನ್’ ಚಿತ್ರದ ಟಿಕೆಟ್ಗಳ ಮೇಲೆ ಯಾವುದೇ ತೆರಿಗೆ ವಿಧಿಸಬಾರದು ಎಂದು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪಿಟಿಐ ವರದಿ ಮಾಡಿದೆ. ಅಖಿಲೇಶ್ ಅವರ ನಿರ್ಧಾರಕ್ಕಾಗಿ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇನೆ ಎಂದು ಸಲ್ಮಾನ್ ಟ್ವೀಟ್ ಮಾಡಿದ್ದಾರೆ.
ಈ ಚಿತ್ರದಲ್ಲಿ ಸಲ್ಮಾನ್ ಭಾರತದಲ್ಲಿ ಕಳೆದುಹೋಗುವ ಪಾಕಿಸ್ತಾನಿ ಹುಡುಗಿಯನ್ನು, ಆಕೆಯ ತಾಯ್ನಾಡಿಗೆ ತಲುಪಿಸುವ ಪಾತ್ರದಲ್ಲಿ ಅಭಿನಯಿಸಿದ್ದಾರೆ.