‘ತಾನು ಮದುವೆಯಾಗುವ ಹುಡುಗ ಹೇಗಿರುತ್ತಾನೆ? ಮದುವೆಯಾದ ಬಳಿಕ ತಾನು ಹೇಗಿರಬೇಕು ಎಂಬ ಯೋಚನೆ ಬಹುತೇಕ ಹುಡುಗಿಯರಿಗೆ ಇರುತ್ತದೆ. ಇದೇ ಎಳೆ ಹಿಡಿದುಕೊಂಡು ಚಿತ್ರ ಸಾಗುತ್ತದೆ. ಮದುವೆ ವಯಸ್ಸಿಗೆ ಬಂದ ಹುಡುಗಿ ಸೇವಂತಿ. ಇಬ್ಬರು ನಾಯಕರ ಹೆಸರೂ ಹೇಮಂತ್. ಅವರ ಪೈಕಿ ನಾಯಕಿ ಸೇವಂತಿ ಯಾರಿಗೆ ಒಲಿಯುತ್ತಾಳೆ? ಈ ನಡುವೆ ನಡೆಯುವ ತಮಾಷೆ ಪ್ರಸಂಗಗಳು ಸಿನಿಮಾದಲ್ಲಿ ಇರಲಿವೆ’ ಎಂದು ಸುಧಾಕರ ಸಿನಿಮಾದ ಹೂರಣ ಬಿಚ್ಚಿಟ್ಟರು.
ಕರಾವಳಿ, ಶಿರಸಿ, ಮಡಿಕೇರಿಯಲ್ಲಿ ಚಿತ್ರೀಕರಣ ನಡೆಯಲಿದೆ. ಮೂರು ಫೈಟ್ ಹಾಗೂ ಒಂದು ಮಸಾಲೆಭರಿತ ಐಟಂ ಸಾಂಗ್ ಕೂಡ ಇದೆಯಂತೆ.
ಉಡುಪಿಯ ರವಿ, ಈ ಚಿತ್ರದ ಮೂಲಕ ನಾಯಕ ಪಾತ್ರಕ್ಕೆ ಬಡ್ತಿ ಪಡೆದಿದ್ದಾರೆ. ಅವರ ಹೆಸರನ್ನು ರಜನೀಶ ಎಂದು ಬದಲಾಯಿಸಲಾಗಿದೆ. ಫಿಟ್ನೆಸ್ ಸೆಂಟರ್ ನಡೆಸುತ್ತಿರುವ ಪುತ್ತೂರು ಮೂಲದ ವಿಜಯಶೆಟ್ಟಿ ಇನ್ನೊಬ್ಬ ನಾಯಕ.
ಹಾಸನ ಮೂಲದ ಲೇಖಚಂದ್ರ ನಾಯಕಿ. ಹಾಡು ಬರೆದ ವಿ. ಮನೋಹರ್, ಸಂಕಲನಕಾರ ಗಿರೀಶ ಉಪಸ್ಥಿತರಿದ್ದರು.