ಅಮರಪ್ರಿಯ ಸಂಗೀತ ಸಂಯೋಜನೆ ಮಾಡಿರುವ ಈ ಚಿತ್ರದಲ್ಲಿ ಒಟ್ಟು ಆರು ಹಾಡುಗಳಿವೆ. ‘ಆನಂದ್ ಆಡಿಯೊ’ ಸಿ.ಡಿಯನ್ನು ಮಾರುಕಟ್ಟೆಗೆ ತಂದಿದೆ. ಮೂರು ಹಾಡುಗಳಿಗೆ ಪುಟ್ಟಯ್ಯಜ್ಜರ ಸಾಹಿತ್ಯ, ಒಂದು ಹಾಡಿಗೆ ಶಿಶುನಾಳ ಶರೀಫರ ಸಾಹಿತ್ಯ ಬಳಸಿಕೊಳ್ಳಲಾಗಿದೆ. ಸಂಗೀತ ನಿರ್ದೇಶಕ ಅಮರ ಪ್ರಿಯ ಅವರು ಮೂರು ಹಾಡುಗಳಿಗೆ ಸಾಹಿತ್ಯ ರಚಿಸಿದ್ದಾರೆ.
ಮೇ ಕೊನೆಯ ಅಥವಾ ಜೂನ್ ಮೊದಲ ವಾರ ಚಿತ್ರ ಬಿಡುಗಡೆಯಾಗುವ ನಿರೀಕ್ಷೆ ಇದೆ. ಉಮೇಶ ಪುರಾಣಿಕ್ ಕಥೆ– ಚಿತ್ರಕಥೆ ಬರೆದಿದ್ದು, ಸತೀಶ್ಚಂದ್ರ ಕ್ಯಾಮೆರಾ ಹಿಡಿದ್ದಾರೆ. ವಿಜಯರಾಘವೇಂದ್ರ ಪುಟ್ಟರಾಜರಾಗಿ ಅಭಿನಯಿಸಿದ್ದಾರೆ. ಈ ಹಿಂದೆ ತೆರೆ ಕಂಡ ‘ಪಂಚಾಕ್ಷರಿ ಗವಾಯಿಗಳು’ ಚಿತ್ರದಲ್ಲೂ ವಿಜಯ ರಾಘವೇಂದ್ರ ಅಭಿನಯಿಸಿದ್ದರು. ಉಳಿದಂತೆ ಶ್ರುತಿ, ಅಭಿಜಿತ್, ಶಶಿಕುಮಾರ್, ಭವ್ಯಶ್ರೀ ರೈ, ಅನು ಪ್ರಭಾಕರ್, ಉಮೇಶ್ ನವಲೆ, ಶಂಕರಲಿಂಗ ಸುಗ್ನಳ್ಳಿ ತಾರಾಗಣದಲ್ಲಿ ಇದ್ದಾರೆ.
ಪುಟ್ಟರಾಜ ಗವಾಯಿಗಳ ಜನ್ಮ ಶತಮಾನೋತ್ಸವ ವರ್ಷದ (2014) ನೆನಪಿಗಾಗಿ ಅವರ ಸಾಧನೆ, ಸೇವೆ ಹಾಗೂ ಜೀವನ ಚರಿತ್ರೆಯನ್ನು ಬೆಳ್ಳಿ ತೆರೆಯ ಮೇಲೆ ತರುವ ಹಂಬಲದಿಂದ ಶ್ಯಾಮ್ ಮುಕುಂದ ನವಲೆ ಈ ಚಿತ್ರ ನಿರ್ಮಿಸಿದ್ದಾರೆ.