ಮೂರು ಭಾಷೆಗಳಲ್ಲಿ ರೂಪುಗೊಳ್ಳುತ್ತಿರುವ `ದ್ರೋಹ' ಅದ್ದೂರಿ ಬಜೆಟ್ನ ಚಿತ್ರ. ಮೂರೂ ಭಾಷೆಗಳಲ್ಲಿನ ಹೂಡಿಕೆ ಪರಿಗಣಿಸಿದರೆ ಇಲ್ಲಿಯವರೆಗೂ ಕನ್ನಡ ನಿರ್ಮಾಪಕರ ಹಣ ಹೂಡಿಕೆಯ ದಾಖಲೆಗಳನ್ನು ಮುರಿಯುವಂತಹ ಚಿತ್ರವಿದು.
ಹಾಲಿವುಡ್ ಚಿತ್ರಗಳ ನಿರ್ಮಾಣಕ್ಕೆ ನೆರವಾಗುವ ಬ್ಯಾಂಕಾಕ್ನ ಬ್ಯಾನ್ರಿಗ್ ಕಂಪೆನಿ `ದ್ರೋಹ'ದ ಮೂಲಕ ಇದೇ ಮೊದಲ ಬಾರಿಗೆ ದಕ್ಷಿಣ ಭಾರತದಲ್ಲಿ ಚಿತ್ರ ನಿರ್ಮಾಣಕ್ಕೆ ಕೈಜೋಡಿಸಿದೆ. ಹೀಗೆ ತಮ್ಮ ಚಿತ್ರದ ವಿಶೇಷಗಳ ಬಗ್ಗೆ ನಿರ್ಮಾಪಕ ಅಣಜಿ ನಾಗರಾಜ್ ಹೇಳಿಕೊಳ್ಳುತ್ತಲೇ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.
ಶ್ರೀನಗರ ಕಿಟ್ಟಿ ಮತ್ತು ಟಿಯಾ ಬಾಜಪೇಯಿ ಅಭಿನಯದ `ದ್ರೋಹ' ಚಿತ್ರ ಬಿಡುಗಡೆಯ ಹಂತ ತಲುಪಿದೆ. ತೆಲುಗು ಮತ್ತು ಹಿಂದಿಯಲ್ಲಿಯೂ ಚಿತ್ರ ತೆರೆ ಕಾಣಲಿದೆ. ಹಿಂದಿಯಲ್ಲಿ `ಹಲ್ಕಟ್' ಮತ್ತು ತೆಲುಗಿನಲ್ಲಿ `ಧಗ' ಹೆಸರಿನಲ್ಲಿ ದ್ರೋಹ ಮೂಡಿಬರಲಿದೆ.
ಬ್ಯಾಂಕಾಕ್ ಎಂದರೆ ಬೀಚು, ನಾಲ್ಕಾರು ಅದ್ದೂರಿ ತಾಣಗಳು ಎನ್ನುವ ಕಲ್ಪನೆ ಇದೆ. ಆದರೆ ಈ ವಾದವನ್ನು ಅಲ್ಲಗಳೆದು ಚಿತ್ರವನ್ನು ಚಿತ್ರೀಕರಿಸಲಾಗಿದೆ. ಮೈ ನವಿರೇಳಿಸುವ ಚೇಸಿಂಗ್ ದೃಶ್ಯಗಳು ಸಿನಿಮಾದ ವಿಶೇಷಗಳಲ್ಲಿ ಸೇರಿವೆ.
ಕಥೆ ಹೆಣೆದು ನಿರ್ದೇಶನದ ಜವಾಬ್ದಾರಿಯನ್ನೂ ನಿಭಾಯಿಸಿರುವ ವಿಜಯ ಕುಮಾರ್ ಮತ್ತು ನವನೀತ್ ಕೌಶಿಕ್, ಮೂರು ಭಾಷೆಗಳಲ್ಲೂ ಪ್ರತ್ಯೇಕವಾಗಿ ಚಿತ್ರೀಕರಣ ನಡೆಸಿದ್ದಾರಂತೆ. `ಚಿತ್ರದಲ್ಲಿ ಯಾವುದೇ ಬಗೆಯ ಸಂದೇಶದ ಎಳೆಗಳಿಲ್ಲ. ಇದು ಅಪ್ಪಟ ಮನರಂಜನೆಯ ಚಿತ್ರ. ಗ್ರಾಫಿಕ್ಸ್ನ ಬಳಕೆ ತುಸು ಹೆಚ್ಚಾಗಿಯೇ ಇದೆ' ಎಂದು ನಿರ್ದೇಶಕರು.
ಬ್ಯಾಂಕಾಕ್, ಪಟ್ಟಾಯ ಸೇರಿದಂತೆ ಹಲವು ಸ್ಥಳಗಳಲ್ಲಿ `ದ್ರೋಹ' 46 ದಿನಗಳ ಕಾಲ ಶೂಟಿಂಗ್ ನಡೆಸಲಾಗಿದೆ. ಚಿತ್ರಕ್ಕೆ ಕವಿರಾಜ್, ಯೋಗರಾಜ್ ಭಟ್ ಮತ್ತು ರಾಂನಾರಾಯಣ್ ಹಾಡುಗಳನ್ನು ಬರೆದಿದ್ದಾರೆ.