ಮಗ ಮತ್ತು ಅವನ ಗೆಳೆಯನ ಆಸೆಯನ್ನು ಈಡೇರಿಸಲು ಹಣ ಹೂಡಿದ ನಿರ್ಮಾಪಕರು ಜಿ.ರಾಮಕೃಷ್ಣ. ಅವರ ಮಗ ‘ನೆನಪಿನಂಗಳ’ ಚಿತ್ರದ ನಾಯಕ. ಗೆಳೆಯ ಧನುಚಂದ್ರ ಚಿತ್ರದ ನಿರ್ದೇಶಕ.
‘ಪ್ರೀತಿಸುವ ನಾಯಕ-ನಾಯಕಿ. ನಾಯಕಿಗೆ ಮನೆಯಲ್ಲಿ ಪ್ರೀತಿ ವಿಷಯ ಹೇಳಲು ಧೈರ್ಯ ಸಾಲದು. ಅವಳು ಹಾಗೆಯೇ ತನ್ನ ಪ್ರೀತಿಯನ್ನು ಕೊಂದುಕೊಂಡರೆ. ಅವಳ ನೆನಪಿನಲ್ಲಿಯೇ ಬದುಕಲು ನಿರ್ಧರಿಸುವ ನಾಯಕನ ಕತೆಯೇ ತಮ್ಮ ‘ನೆನಪಿನಂಗಳ’ ಎನ್ನುತ್ತಾರೆ ನಿರ್ದೇಶಕ. ಇದು ದೊಡ್ಡಬಳ್ಳಾಪುರದಲ್ಲಿ ನಡೆದ ನೈಜ ಘಟನೆ ಎಂಬುದು ಅವರ ಮಾತೇ.
ದೊಡ್ಡಬಳ್ಳಾಪುರ, ಸಕಲೇಶಪುರ, ಬೆಂಗಳೂರು ಮುಂತಾದ ಕಡೆ ಹಾಡುಗಳು ಮತ್ತು ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳಲಾಗಿದೆ. ಎರಡು ಹಾಡು ಮತ್ತು ಕ್ಲೈಮ್ಯಾಕ್ಸ್ ಬಾಕಿ ಇದೆ.
ದೊಡ್ಡಬಳ್ಳಾಪುರ ನಗರಸಭೆಯ ಉಪಾಧ್ಯಕ್ಷ ರಾಮಕೃಷ್ಣ ಮಾತನಾಡಿ, ‘ಚಿತ್ರದ ಬಜೆಟ್ ಈಗಾಗಲೇ ಒಂದು ಕೋಟಿ ದಾಟಿದೆ. ಇನ್ನೂ ಹಾಡುಗಳು ಹಾಗೂ ಪೋಸ್ಟ್ ಪ್ರೊಡಕ್ಷನ್ಸ್ ಬಾಕಿ ಇದೆ’ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಾಯಕ ಹೇಮಂತ್, ನಾಯಕಿ ಸುಪ್ರಿತಾ, ನಿರ್ಮಾಪಕ ಜಿ.ರಾಮಕೃಷ್ಣ, ಸಂಗೀತ ನಿರ್ದೇಶಕಿ ಸಿ.ಆರ್.ಬಾಬಿ, ಛಾಯಾಗ್ರಾಹಕ ರೇಣುಕುಮಾರ್ ಹಾಜರಿದ್ದರು.