ಹೈದರಾಬಾದ್: ತಮಿಳು ಚಿತ್ರರಂಗದ ಸೂಪರ್ಸ್ಟಾರ್ ರಜನಿಕಾಂತ್ ಆರೋಗ್ಯ ಸ್ಥಿತಿ ಸುಧಾರಿಸಿದ್ದು, ಭಾನುವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ತೀವ್ರ ರಕ್ತದೊತ್ತಡದ ಸಮಸ್ಯೆಯಿಂದಾಗಿ ಅವರು ಡಿಸೆಂಬರ್ 25ರಂದು ಇಲ್ಲಿನ ಅಪೊಲೊ ಆಸ್ಪತ್ರೆಗೆ ದಾಖಲಾಗಿದ್ದರು.
ಅವರಲ್ಲಿ ರಕ್ತದೊತ್ತಡ ಸ್ಥಿರವಾಗಿದ್ದು, ಆರೋಗ್ಯ ಸುಧಾರಿಸಿದೆ ಎಂದು ಅಪೊಲೊ ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದೆ. ಒಂದು ವಾರ ಸಂಪೂರ್ಣ ವಿಶ್ರಾಂತಿ ಮತ್ತು ರಕ್ತದೊತ್ತಡದ ಮೇಲೆ ನಿಗಾವಹಿಸುವುದು, ದೈಹಿಕಶ್ರಮ ವಹಿಸದಿರುವುದು ಹಾಗೂ ಒತ್ತಡಕ್ಕೆ ಒಳಗಾಗಬಾರದು ಎಂದು ಸಲಹೆ ನೀಡಲಾಗಿದೆ.
ಸನ್ ಪಿಕ್ಚರ್ಸ್ ನಿರ್ಮಾಣದ 'ಅಣ್ಣಾತೆ' ಎಂಬ ತಮಿಳು ಚಿತ್ರದ ಚಿತ್ರೀಕರಣಕ್ಕಾಗಿ ಅವರು ಡಿಸೆಂಬರ್ 13 ರಿಂದ ಹೈದರಾಬಾದ್ನಲ್ಲಿ ಬೀಡುಬಿಟ್ಟಿದ್ದಾರೆ. ಚಿತ್ರೀಕರಣ ತಂಡದಲ್ಲಿ ನಾಲ್ವರು ಸಿಬ್ಬಂದಿಗೆ ಕೋವಿಡ್-19 ದೃಢಪಟ್ಟ ಬೆನ್ನಲ್ಲೇ ರಜನಿಕಾಂತ್ ಪರೀಕ್ಷೆಗೆ ಒಳಗಾಗಿದ್ದರು. ವರದಿ ನೆಗೆಟಿವ್ ಬಂದಿದ್ದರೂ ಅವರು ಪ್ರತ್ಯೇಕ ವಾಸದಲ್ಲಿದ್ದರು.
2021ರ ಜನವರಿಯಲ್ಲಿ ರಜನಿಕಾಂತ್ ನೇತೃತ್ವದ ಹೊಸ ರಾಜಕೀಯ ಪಕ್ಷಕ್ಕೆ ಚಾಲನೆ ಸಿಗಲಿದ್ದು, ಡಿಸೆಂಬರ್ 31ರಂದು ಅಧಿಕೃತ ಪ್ರಕಟಣೆ ಹೊರ ಬೀಳುವ ಸಾಧ್ಯತೆಯಿದೆ. ಮುಂದಿನ ವರ್ಷ ತಮಿಳುನಾಡು ವಿಧಾನಸಭಾ ಚುನಾವಣೆ ನಡೆಯಲಿದೆ.