ಶ್ರೀರಂಗಪಟ್ಟಣ: ಪಾಂಡವಪುರ ತಾಲ್ಲೂಕು ಹಿರೇಮರಳಿ ಗ್ರಾಮದ ರಾಘವ ಎಂಬುವರ ಕಾಲಿನ ಚಿಕಿತ್ಸೆಗೆ ಆರ್ಥಿಕ ನೆರವು ನೀಡುವುದಾಗಿ ಚಿತ್ರನಟ ಸುದೀಪ್ ಭರವಸೆ ನೀಡಿದರು.
ಸೋಮವಾರ ಮೈಸೂರಿನಿಂದ ಬೆಂಗಳೂರಿಗೆ ತೆರಳುವ ಮಾರ್ಗಮಧ್ಯೆ ಟಿ.ಎಂ. ಹೊಸೂರು ಗೇಟ್ ಬಳಿ ಸುದೀಪ್ ಅವರನ್ನು ರಾಘವ ಹಾಗೂ ಅವರ ಗೆಳೆಯರು ಭೇಟಿಯಾದರು. ಈ ವೇಳೆ, ರಾಘವ ಅವರ ಆರೋಗ್ಯ ವಿಚಾರಿಸಿದ ಸುದೀಪ್, ‘ಎದೆಗುಂದಬೇಡಿ. ನಿಮ್ಮ ಕಾಲನ್ನು ಸರಿಪಡಿಸುವ ಜವಾಬ್ದಾರಿ ನನ್ನದು. ಧೈರ್ಯದಿಂದಿರಿ’ ಎಂದು ಧೈರ್ಯ ತುಂಬಿದರು.
‘ರಾಘವ ಅವರ ಸಂಪೂರ್ಣ ಮಾಹಿತಿ ಪಡೆದುಕೊಳ್ಳಿ’ ಎಂದು ತಮ್ಮ ಸಹಾಯಕರಿಗೆ ಸುದೀಪ್ ಸೂಚಿಸಿದರು.
ಕೆಲವು ತಿಂಗಳ ಹಿಂದೆ ನಡೆದ ರಸ್ತೆ ಅಪಘಾತದಲ್ಲಿ ರಾಘವ ಅವರ ಒಂದು ಕಾಲಿಗೆ ತೀವ್ರ ಪೆಟ್ಟು ಬಿದ್ದಿದೆ. ಊನವಾಗಿರುವ ಕಾಲು ಸರಿಪಡಿಸಲು ಹಣಕಾಸಿನ ಅಗತ್ಯವಿತ್ತು. ಸುದೀಪ್ ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿರುವ ವಿಷಯ ತಿಳಿದು ಭೇಟಿಯಾಗಿದರು.
‘ಸುದೀಪ್ ಅವರ ಭರವಸೆಯಿಂದ ನನಗೆ ಧೈರ್ಯ ಬಂದಿದೆ’ ಎಂದು ರಾಘವ ಸಂತಸ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.