ವಿಶ್ವ ರಂಗಭೂಮಿ ದಿನದ ಅಂಗವಾಗಿ ಕಳೆದ ಬುಧವಾರ (ಮಾ.27) ನಾಗರಾಜ ಕೋಟೆ ಅವರ `ಕೋಟೆ ಕಲಾ ಅಕಾಡೆಮಿ ಟ್ರಸ್ಟ್'ನ ಬಣ್ಣ ಅಭಿನಯ ಶಾಲೆಯ ವಿದ್ಯಾರ್ಥಿಗಳು ಬೀದಿ ನಾಟಕ ಆಯೋಜಿಸಿದ್ದರು.
ಟಿ.ಎಸ್. ಲೋಹಿತಾಶ್ವ ರಚನೆಯ `ಗದ್ದುಗೆ ಪುರಾಣ' ನಾಟಕವನ್ನು ಪ್ರದರ್ಶಿಸಲಾಯಿತು. ಈ ಜಾಥಾವು ನಗರದ ನಾಲ್ಕು ಸ್ಥಳಗಳಲ್ಲಿ ನಡೆಯಿತು.
ಮೊದಲ ಪ್ರದರ್ಶನ ಗಿರಿನಗರದ ಸೀತಾ ಸರ್ಕಲ್ನಲ್ಲಿ ಬೆಳಿಗ್ಗೆ 10.30ರಿಂದ ಆರಂಭವಾಯಿತು. ಎರಡನೆ ಪ್ರದರ್ಶನ ಮಧ್ಯಾಹ್ನ 12.30ರಿಂದ 1.30ರವರೆಗೆ ಪದ್ಮನಾಭನಗರದ `12ಬಿ' ನಿಲ್ದಾಣದ ಬಳಿ ನಡೆಯಿತು. ಮೂರನೇ ಪ್ರದರ್ಶನ ಬನಶಂಕರಿ ದೇವಸ್ಥಾನದ ಹತ್ತಿರದ ಬಿಎಂಟಿಸಿ ಬಸ್ ನಿಲ್ದಾಣ ಹಾಗೂ ಕೊನೆಯ ಪ್ರದರ್ಶನ ತ್ಯಾಗರಾಜನಗರದ ಡಾ. ರಾಜಕುಮಾರ್ ರಂಗಮಂದಿರದ ಬಳಿ ಸಂಜೆ 4.30ರಿಂದ 5.30ರವರೆಗೆ ನಡೆಯಿತು.
ಹಾಸ್ಯ ಕಲಾವಿದ ನಾಗರಾಜ ಕೋಟೆ ಅವರು ಗದ್ದುಗೆ ಪುರಾಣ ನಾಟಕ ನಿರ್ದೇಶಿಸಿದ್ದರು. ನಾಲ್ಕು ಸ್ಥಳಗಳಲ್ಲೂ ಹೆಚ್ಚಿನ ಸಂಖ್ಯೆಯ ರಂಗಾಸಕ್ತರು ಬೀದಿ ನಾಟಕ ವೀಕ್ಷಿಸುವ ಮೂಲಕ ರಂಗಭೂಮಿ ದಿನಕ್ಕೆ ವಿಶೇಷ ರಂಗು ತಂದರು.