‘ಸ್ಟಾರ್ ಸುವರ್ಣ’ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ‘ಕನ್ನಡದ ಕೋಟ್ಯಧಿಪತಿ’ ಕಾರ್ಯಕ್ರಮದ 50ನೇ ಸಂಚಿಕೆ ಶುಕ್ರವಾರ (ಆ. 31) ಪ್ರಸಾರವಾಗಲಿದೆ. 50ನೇ ಸಂಚಿಕೆ ವಿಶೇಷವೊಂದನ್ನು ಹೊತ್ತು ತರುತ್ತಿದೆ. ರಕ್ಷಿತ್ ಶೆಟ್ಟಿ ಈ ಸಂಚಿಕೆಯಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ. ರಕ್ಷಿತ್ ಜೊತೆ ಅವರ ತಂದೆ, ತಾಯಿ, ಸಹೋದರ ರಂಜಿತ್ ಮತ್ತು ಸಿನಿಮಾ ನಿರ್ಮಾಪಕ ಪುಷ್ಕರ ಮಲ್ಲಿಕಾರ್ಜುನಯ್ಯ ಕೂಡ ಕಾಣಿಸಿಕೊಳ್ಳಲಿದ್ದಾರೆ.
ಈ ಸಂಚಿಕೆಯಲ್ಲಿ ರಕ್ಷಿತ್ ಕುರಿತ ಹಲವು ಆಸಕ್ತಿಕರ ಸಂಗತಿಗಳು ಬಯಲಾಗಲಿವೆ ಎಂದು ವಾಹಿನಿ ಹೇಳಿದೆ. ರಕ್ಷಿತ್ ಅವರ ತಂದೆ, ತಾಯಿ, ಮಲ್ಲಿಕಾರ್ಜುನಯ್ಯ, ನಿರ್ದೇಶಕ ಸಿಂಪಲ್ ಸುನಿ, ಹೇಮಂತ್ ರಾವ್, ಕಿರಣ್ ರಾಜ್ ಹಲವು ಗುಟ್ಟುಗಳನ್ನು ರಟ್ಟು ಮಾಡಲಿದ್ದಾರೆ.
ಅಂದಹಾಗೆ, ರಕ್ಷಿತ್ ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದಕ್ಕೆ ಇನ್ನೊಂದು ಕಾರಣ ಕೂಡ ಇದೆ. ಕೊಡಗಿನ ಪ್ರವಾಹ ಸಂತ್ರಸ್ತರಿಗೆ ನೆರವು ನೀಡುವ ಉದ್ದೇಶದಿಂದ ರಕ್ಷಿತ್ ಇದರಲ್ಲಿ ಭಾಗವಹಿಸಿದ್ದಾರೆ.
ನಿರ್ದೇಶಕ ಕೂಡ ಆಗಿರುವ ರಕ್ಷಿತ್ ಕನ್ನಡದ ನಾಯಕ ನಟರಾದ ಶಿವರಾಜ್ ಕುಮಾರ್, ಉಪೇಂದ್ರ, ರವಿಚಂದ್ರನ್, ಅಂಬರೀಷ್ ಮತ್ತು ರಮೇಶ್ ಅರವಿಂದ್ ಅವರಿಗೆ ಯಾವ ರೀತಿಯ ಸಿನಿಮಾ ಮಾಡಲು ಬಯಸುತ್ತಾರೆ ಎಂಬುದನ್ನು ತಿಳಿಯಬೇಕಾದರೆ, ‘ಕನ್ನಡದ ಕೋಟ್ಯಧಿಪತಿ’ ನೋಡಬೇಕಂತೆ.