ಬೆಂಗಳೂರು: ಈ ವಾರ ಬಿಗ್ಬಾಸ್ ಮನೆಯಲ್ಲಿ ರಾಕ್ಷಸರು ಹಾಗೂ ಗಂಧರ್ವರ ಟಾಸ್ಕ್ನಲ್ಲಿ ಸ್ಪರ್ಧಿಗಳ ಪರಸ್ಪರ ನಡವಳಿಕೆ ವೈಯಕ್ತಿಕ ಜಿದ್ದಾಜಿದ್ದಿಗೆ ಕಾರಣವಾಯಿತು.
ಈ ನಡುವೆ ಟಾಸ್ಕ್ನಲ್ಲಿ ರಾಕ್ಷಸರು ಗಂಧರ್ವರಾಗಿದ್ದ ಸಂಗೀತಾ ಮತ್ತು ಪ್ರತಾಪ್ ಅವರನ್ನು ಗುರಿಯಾಗಿಸಿಕೊಂಡು ಆಟ ಆಡಿದ್ದಾರೆ. ಇದರಿಂದ ಅವರಿಬ್ಬರ ಆರೋಗ್ಯದ ಮೇಲೆ ಪರಿಣಾಮ ಬೀರಿದೆ.
ರಾಕ್ಷಸರು -ಗಂಧರ್ವರ ಟಾಸ್ಕ್ನಲ್ಲಿ ಸ್ಪರ್ಧಿಗಳು ನಡುವಿನ ಮಾತಿನ ಚಕಮಕಿ ವೈಯಕ್ತಿಕವಾಗಿದ್ದಲ್ಲದೇ, ದೈಹಿಕವಾಗಿ ಗಾಯಗೊಳ್ಳುವ ಹಂತಕ್ಕೂ ಹೋಯಿತು. ಸಂಗೀತಾ ಮತ್ತು ಪ್ರತಾಪ್ ಇಬ್ಬರೂ ಆಸ್ಪತ್ರೆ ಸೇರಿಕೊಳ್ಳುವಂತಾಗಿತ್ತು. ಈ ವಾರದ ‘ಕಿಚ್ಚನ ಪಂಚಾಯ್ತಿ’ಯಲ್ಲಿ ಸುಂಟರಗಾಳಿಯೇ ಏಳುವ ಸಂಭವವಿದೆ ಎನ್ನುವ ದೃಶ್ಯಗಳು ಜಿಯೊ ಸಿನಿಮಾ ಬಿಡುಗಡೆ ಮಾಡಿದ ವಿಡಿಯೊದಲ್ಲಿದೆ
ಗಂಧರ್ವರು ರಾಕ್ಷಸರಾಗಿದ್ದಕ್ಕೆ, ರಾಕ್ಷಸರು ಕಟುಕರಾಗಿ ಬದಲಾಗಿದ್ದರ ಬಗ್ಗೆ ಕಿಚ್ಚ ಸುದೀಪ್ ‘ಪಂಚಾಯ್ತಿ’ಯಲ್ಲಿ ಚರ್ಚೆ ನಡೆಸಲಿದ್ದಾರೆ. ಎರಡು ದಿನಗಳ ಹಿಂದೆಯೇ ಟಾಸ್ಕ್ನಲ್ಲಿ ಗಾಯಗೊಂಡು ತುರ್ತಾಗಿ ಪ್ರತಾಪ್-ಸಂಗೀತಾ ಆಸ್ಪತ್ರೆಗೆ ಸೇರಿದ್ದರು. ಅವರ ಬಗ್ಗೆ ಮನೆಯವರಿಗೆ ಸುಳಿವೇ ಇರಲಿಲ್ಲ. ಆದರೆ ಇಂದು ಕಿಚ್ಚನ ಪಂಚಾಯ್ತಿಗೆ ಎಲ್ಲರೂ ರೆಡಿಯಾಗಿ ಕೂತಿದ್ದಾಗ ಬಿಗ್ಬಾಸ್ ಮನೆಯ ಬಾಗಿಲು ತೆರೆದುಕೊಂಡಿದೆ. ತೆರೆದ ಬಾಗಿಲಿನಿಂದ ಪ್ರತಾಪ್ ಮತ್ತು ಸಂಗೀತಾ ಇಬ್ಬರೂ ಒಳಗೆ ಬಂದಿದ್ದಾರೆ. ಆದರೆ ಅವರನ್ನು ನೋಡಿ ಮನೆಯವರೆಲ್ಲರೂ ಶಾಕ್ ಆಗಿದ್ದಾರೆ. ತನಿಷಾ ಅವರಂತೂ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.