ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಜಾಗೃತಿ: ಬಾಲಕಿಗೆ ಪ್ರಶಸ್ತಿಯ ಗರಿ

ಆಸ್ಟ್ರೇಲಿಯಾದ ಗ್ಲೋಬಲ್‌ ಪೀಸ್‌ ಇಂಡೆಕ್ಸ್‌ ಇನ್‌ಸ್ಟಿಟ್ಯೂಷನ್ ನೀಡುವ ಪುರಸ್ಕಾರ
Last Updated 9 ಅಕ್ಟೋಬರ್ 2019, 19:45 IST
ಅಕ್ಷರ ಗಾತ್ರ

ಪರಿಸರ ಕಲುಷಿತವಾಗುತ್ತಿದೆ. ಶುದ್ಧ ಗಾಳಿ ಸಿಗದೆ, ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕುಡಿಯುವ ನೀರು ಮಲಿನವಾಗುತ್ತಿದೆ. ಕೈಗಾರಿಕೀಕರಣ, ಅಭಿವೃದ್ಧಿಯ ಹೆಸರಲ್ಲಿ ಮರಗಳ ಮಾರಣಹೋಮ. ಅರಣ್ಯ ನಾಶವಾಗುತ್ತಿದೆ. ಇದರಿಂದ ವಾತಾವರಣದಲ್ಲಿನ ತಾಪಮಾನ ಗಣನೀಯವಾಗಿ ಏರಿಕೆಯಾಗುತ್ತಿದೆ. ಇದು ಹೀಗೆ ಮುಂದುವರಿದರೆ ಮನುಕುಲ ಬದುಕಲು ಸಾಧ್ಯವೆ? ಇಂತಹ ಗಂಭೀರ ಸಮಸ್ಯೆಗಳ ಬಗ್ಗೆ ಜನರಲ್ಲಿ ಪರಿಸರ ಜಾಗೃತಿ ಮೂಡಿಸುತ್ತಿದ್ದಾಳೆ ಈ ಬಾಲಕಿ !

ಆಕೆ ಹೆಸರು ಲಿಸಿಪ್ರಿಯಾ ಕಂಗುಜಮ್‌. ಏಳು ವರ್ಷದ ಈ ಬಾಲೆ ಮಣಿಪುರದವಳು. ವಯಸ್ಸು ಚಿಕ್ಕದಾದರೂ, ಆಕೆ ದೊಡ್ಡ ದೊಡ್ಡ ವಿಷಯಗಳ ಬಗ್ಗೆ ಚಿಂತನೆ ನಡೆಸುತ್ತಾಳೆ. ಜ್ವಲಂತ ಸಮಸ್ಯೆಗಳ ವಿರುದ್ಧ ಪ್ರತಿಭಟನೆ ಮಾಡುತ್ತಾ ವಿಶ್ವದ ಗಮನ ಸೆಳೆಯುತ್ತಿದ್ದಾಳೆ. ಈ ಪುಟಾಣಿಯ ಸಾಧನೆಗೆ 2019ರ ‘ವರ್ಲ್ಡ್‌ ಚಿಲ್ಡ್ರನ್‌ ಪೀಸ್‌ ಪ್ರೈಜ್‌’ ಕೂಡ ಅರಸಿಕೊಂಡು ಬಂದಿದೆ.

ಶಾಂತಿ ಮತ್ತು ಆರ್ಥಿಕ ವ್ಯವಸ್ಥೆಯನ್ನು ಅಧ್ಯಯನ ಮಾಡುವ ಆಸ್ಟ್ರೇಲಿಯಾದ ಗ್ಲೋಬಲ್‌ ಪೀಸ್‌ ಇಂಡೆಕ್ಸ್‌ ಇನ್‌ಸ್ಟಿಟ್ಯೂಷನ್ ಈ ಪ್ರಶಸ್ತಿಯನ್ನು ಪ್ರತಿ ವರ್ಷ ನೀಡುತ್ತಿದೆ. ಈಚೆಗಷ್ಟೇ ಮಾಲ್ದೀವ್ಸ್ ಸರ್ಕಾರದ ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವಾಲಯ ಆಯೋಜಿಸಿದ್ದ ಸಮಾರಂಭದಲ್ಲಿ ಲಿಸಿಪ್ರಿಯಾಗೆ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಬಾಲಕಿ ಮಾಡಿದ್ದೇನು?

ಭಾರತ ಸರ್ಕಾರ ಮತ್ತು ಸಾರ್ಕ್‌ ಸದಸ್ಯ ರಾಷ್ಟ್ರಗಳಿಗೆ ತಾಪಮಾನ ನಿಯಂತ್ರಣ ಕಾನೂನು ಜಾರಿಗೆ ತರುವಂತೆ ನಿರಂತರವಾಗಿ ಮನವಿ ಮಾಡುತ್ತಿದ್ದಾಳೆ. ಬಿಸಿಲು, ಮಳೆಯೆಂಬುದನ್ನೂ ಲೆಕ್ಕಿಸದೇ ಜಾಗೃತಿ ಮೂಡಿಸುವ ಫಲಕಗಳನ್ನು ಹಿಡಿದು ಜಾಥಾ ಮಾಡುತ್ತಾಳೆ. ಈ ಮೂಲಕ ತಾಪಮಾನದ ಬಗ್ಗೆ ಜಾಗೃತಿ ಮೂಡಿಸುತ್ತಿರುವ ವಿಶ್ವದ ಅತಿ ಕಿರಿಯ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾಳೆ. ಈಚೆಗಷ್ಟೇ ದೆಹಲಿಯಲ್ಲಿರುವ ಸಂಸತ್ ಭವನದ ಮುಂದೆಯೂ ಲಿಸಿಪ್ರಿಯಾ ಪ್ರತಿಭಟನೆ ಮಾಡಿದ್ದಳು.

ಈವರೆಗೆ ನೂರಾರು ಗಿಡಗಳನ್ನು ನೆಟ್ಟಿದ್ದಾಳೆ. ತನ್ನ ಸ್ನೇಹಿತರೊಂದಿಗೆ ಜತೆಯಾಗಿ ಹಲವು ಕಡಲ ತೀರಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡಿದ್ದಾಳೆ. ವಿವಿಧ ದೇಶಗಳಲ್ಲಿ ಪರಿಸರ ಸಂರಕ್ಷಣೆ ಕುರಿತು ಉಪನ್ಯಾಸ ನೀಡಿದ್ದಾಳೆ. ‘ಉಪನ್ಯಾಸಕ್ಕಾಗಿ ಬೇರೆ ಬೇರೆ ಕಡೆಗೆ ಹೋಗುತ್ತಿರುವುದರಿಂದ ಶಾಲೆಯಲ್ಲಿ ಹಾಜರಾತಿ ಕಡಿಮೆ ಆಗುತ್ತಿದೆ. ನಿತ್ಯ ಓದದಿದ್ದರೆ, ಬರೆಯದಿದ್ದರೆ ಮೆದುಳು ಕೆಲಸ ಮಾಡುವುದಿಲ್ಲ. ಶಿಕ್ಷಣವಿದ್ದರೆ ಸಾಧನೆ ಮಾಡುವುದು’ ಸುಲಭ ಎನ್ನುತ್ತಾಳೆ ಲಿಸಿಪ್ರಿಯ.

ದೇಶ–ವಿದೇಶಗಳ ಸುತ್ತಾಟ

ಪ್ರಸ್ತುತ ಸಿಂಗಪುರ, ಥಾಯ್ಲೆಂಡ್, ಮಾಲ್ದೀವ್ಸ್‌, ಅಂಗೋಲಾ ಮತ್ತು ಅಮೆರಿಕ ದೇಶಗಳಲ್ಲಿ ಜಾಗತಿಕ ತಾಪಮಾನದ ಕುರಿತು ಚರ್ಚೆ ನಡೆಸಿದ್ದಾಳೆ. ಪ್ಲಾಸ್ಟಿಕ್‌ ಬಳಕೆಯಿಂದ ಆಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವುದರ ಜತೆಗೆ ಪುನರ್ಬಳಕೆ ಬಗ್ಗೆ ಮಾಹಿತಿಯನ್ನೂ ನೀಡುತ್ತಿದ್ದಾಳೆ.‘ಇರುವುದೊಂದೇ ಭೂಮಿ. ವನ್ಯ ಸಂಪತ್ತು, ನೀರು, ಗಾಳಿಯನ್ನು ಸಂರಕ್ಷಿಸಬೇಕಾದ ಅನಿವಾರ್ಯತೆ ಇದೆ’ ಎಂದು ಪ್ರತಿ ಉಪನ್ಯಾಸದಲ್ಲೂ ಒತ್ತಿ ಹೇಳುತ್ತಿದ್ದಾಳೆ. ಹೀಗಾಗಿ ವಾತಾವರಣದಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಹಲವು ದೇಶಗಳು ಉಪನ್ಯಾಸ ನೀಡಲು ಇವಳನ್ನು ಆಹ್ವಾನಿಸುತ್ತಿವೆ. ಪರಿಸರ ಕುರಿತು ಜಾಗೃತಿ ಮೂಡಿಸುತ್ತಿರುವ ಲಿಸಿಪ್ರಿಯಾಳಿಗೆ, 2019ರ ಅಮೆರಿಕ ತಾಪಮಾನ ಶೃಂಗಸಭೆಗೂ ಆಹ್ವಾನ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT